ಬಿ.ಎಸ್. ವೈ ಯವರು ಕರ್ನಾಟಕ ರಾಜ್ಯ ಕಂಡ ಅತ್ಯಂತ ‘ದುರ್ಬಲ’ ಮುಖ್ಯಮಂತ್ರಿ : ಸಿದ್ದರಾಮಯ್ಯ -Vishwanews24

Featured, ರಾಷ್ಟ್ರ ನ್ಯೂಸ್

ಕಲಬುರಗಿ: ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯ ಕಂಡ ಅತ್ಯಂತ ‘ದುರ್ಬಲ’ ಮುಖ್ಯಮಂತ್ರಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಂದ ಕೇಂದ್ರದ ನೆರವು ಪಡೆಯಲು ಅವರಿಗೆ ಯಾವುದೇ ಧೈರ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಟೀಕಿಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಅನುದಾನ ಕೇಳಲು ಯಡಿಯೂರಪ್ಪ ಹೆದರುತ್ತಿದ್ದಾರೆ. ಅವರು ಯಾಕಾಗಿ ಹೆದರುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ನಿನ್ನೆ ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟಕ್ಕೆ ಸೇರಿದವರು ನಮ್ಮ ಆಪ್ತರು ಅಥವಾ ಸ್ನೇಹಿತರು ಅಲ್ಲ. ನೈಜ ಗೆಳೆಯರು ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಅವರು ತಮ್ಮೊಂದಿಗೆ ಆಪ್ತರಂತೆ ನಟಿಸಿದ್ದರು ಅಷ್ಟೇ. ಆದರೆ ನಿಜವಾಗಿ ಅವರು ಆಪ್ತರಾಗಿರಲಿಲ್ಲ ಎಂದು ಹೇಳಿದರು

ಇದಕ್ಕೂ ಮುನ್ನ 85  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಸಮಾರೋಪ  ಸಭೆಯಲ್ಲಿ ಮಾತನಾಡಿದ ಅವರು,  ಅಭಿವ್ಯಕ್ತಿ ಸ್ವಾತಂತ್ರ್ಯ ಸಾಹಿತ್ಯದ ಉಸಿರು, ಸ್ವಾತಂತ್ರ್ಯದ  ಜೀವವಾಗಿದೆ. ಆದ್ದರಿಂದ ಅದನ್ನು ಮೊಟಕುಗೊಳಿಸುವ ಹಕ್ಕು ಯಾರಿಗೂ ಇಲ್ಲ ಎಂದರು.

ಅಭಿವ್ಯಕ್ತಿ ಸಾಹಿತ್ಯದ ಉಸಿರು, ಜೀವ ಹೀಗಾಗಿ ಅದನ್ನು  ಹತ್ತಿಕ್ಕುವ ಪ್ರಯತ್ನವನ್ನು ಯಾವುದೇ ಸರ್ಕಾರ, ಪಕ್ಷ ಮಾಡಬಾರದು ಎಂದು ಅವರು  ಎಚ್ಚರಿಸಿದರು.

ಕಲಬುರಗಿಯಲ್ಲಿ  ಮೂರು ದಿನಗಳ ಕಾಲ‌ ನಡೆದ ಸಮ್ಮೇಳನದಲ್ಲಿ 4-5 ಲಕ್ಷ ಜನ ಭಾಗವಹಿಸಿದ್ದು, ನಿಜಕ್ಕೂ  ಕನ್ನಡದ ಅಸ್ಮೀತೆಯ ದೃಷ್ಟಿಯಿಂದ ಇದೊಂದು ಸ್ವಾಗತಾರ್ಹ ವಿಚಾರ ಎಂದರು.