ಬೆಲೆ ಏರಿಕೆ ಬಿಜೆಪಿಗೆ ದುಬಾರಿಯಾಗಲಿದೆ ಜಾಗೃತೆ ಎಂದ ಬಾಬಾ ರಾಮದೇವ್

Featured, ರಾಷ್ಟ್ರ ನ್ಯೂಸ್

ನವದೆಹಲಿ : ಕೇಂದ್ರ ಸರ್ಕಾರವು ಬೆಲೆ ಏರಿಕೆಯನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅದು ಬಿಜೆಪಿಗೆ ದುಬಾರಿಯಾಗಲಿದೆ ಎಂದು ಯೋಗ ಗುರು ರಾಮದೇವ್‌ ಅಭಿಪ್ರಾಯಪಟ್ಟಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. 2014ರ ಚುನಾವಣೆಯಲ್ಲಿ ಅವರು ಬಿಜೆಪಿ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದರು.

‘ಮೋದಿ ಅವರ ನೀತಿಗಳನ್ನು ಹಲವರು ಹೊಗಳುತ್ತಿದ್ದಾರೆ. ಆದರೆ ಅವುಗಳಲ್ಲಿ ಕೆಲವನ್ನು ಸರಿಪಡಿಸುವ ಅಗತ್ಯ ಇದೆ’ ಎಂದು ಅವರು ಹೇಳಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಸೇರಿ ವಿವಿಧ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾವು ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ, ಮಧ್ಯಪಂಥೀಯ. ಕೆಲವು ಮಹತ್ವದ ವಿಚಾರಗಳಲ್ಲಿ ‘ಮೌನ ಯೋಗ’ ಅನುಸರಿಸುತ್ತಿರುವುದರಿಂದ ಪ್ರಶ್ನೆ ಕೇಳಿ ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

‘ನಾನು ರಾಜಕೀಯದಿಂದ ಹಿಂದೆ ಸರಿದಿದ್ದೇನೆ. ಎಲ್ಲ ಪಕ್ಷಗಳ ಜತೆಗೂ ಇದ್ದೇನೆ. ಹಾಗಿದ್ದರೂ ನಾನು ಸ್ವತಂತ್ರ’ ಎಂದು ಅವರು ಹೇಳಿಕೊಂಡಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ‍ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಹಣ ಕೊಟ್ಟು ಜನರ ಜೇಬು ಖಾಲಿಯಾಗಿದೆ. ಹಾಗಾಗಿ ಅದನ್ನು ಜಿಎಸ್‌ಟಿಯ ಅತ್ಯಂತ ಕಡಿಮೆ ತೆರಿಗೆಯ ಹಂತಕ್ಕೆ ಸೇರಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಜಾಹಿರಾತು: ಪಂಡೀತ್ ಸುದರ್ಶನ್ ಭಟ್