ಭಯೋತ್ಪಾದರ ದಾಳಿಗೆ ಪ್ರತ್ಯುತ್ತರ ನೀಡಲು ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ : ಪ್ರಧಾನಿ ನರೇಂದ್ರ ಮೋದಿ – Vishwanews24
ಹೊಸದಿಲ್ಲಿ: ಪಾಕ್ ಭಯೋತ್ಪಾದರ ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಭದ್ರತೆ ಕುರಿತ ಸಂಪುಟ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯನ್ನು ಸಮೂಲ ನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ನಮ್ಮ ವೀರ ಯೋಧರನ್ನು ಹತ್ಯೆ ಮಾಡಿದವರ ಮೇಲೆ ತಕ್ಕ ಪ್ರತೀಕಾರ ತೀರಿಸಲಾಗುವುದು. ಇಂತಹ ಹೀನ ಕೃತ್ಯಕ್ಕೆ ಅವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಈ ಯುದ್ಧವನ್ನು ನಾವು ಗೆಲ್ಲುವುದಕ್ಕಾಗಿಯೇ ಹೋರಾಡುತ್ತೇವೆ. ನೆರೆಯ ದೇಶದ ರಣಹೇಡಿ ಕೃತ್ಯದ ಬಗ್ಗೆ ದೇಶಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶವನ್ನು ನಾವು ಗೌರವಿಸುತ್ತೇವೆ ಎಂದು ಮೋದಿ ಘೋಷಿಸಿದರು.
ಭಯೋತ್ಪಾದನೆ ವಿರುದ್ಧದ ಭಾರತದ ಸಮರಕ್ಕೆ ಬೆಂಬಲ ಘೋಷಿಸಿದ ಎಲ್ಲ ದೇಶಗಳಿಗೆ ನಾವು ಆಭಾರಿಗಳಾಗಿದ್ದೇವೆ. ಭಯೋತ್ಪಾದನೆಗೆ ಭೂಮಿಯ ಮೇಲೆ ಎಲ್ಲೂ ಜಾಗವಿರಕೂಡದು ಎಂದು ಪ್ರಧಾನಿ ಮೋದಿ ನುಡಿದರು.
