ಭಾರತೀಯ ರಾಜಕಾರಣದಲ್ಲಿನ ಒಂದು ಅದ್ಭುತ ಅಧ್ಯಾಯವು ಕೊನೆಗೊಂಡಿದೆ, ಅವರೊಂದಿಗೆ ಕಾರ್ಯನಿರ್ವಹಿಸಿದ್ದ 5 ವರ್ಷದ ಅವಧಿ ಸ್ಮರಣೀಯ : ಪ್ರಧಾನಿ ಮೋದಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ,: ಭಾರತೀಯ ರಾಜಕಾರಣದಲ್ಲಿನ ಒಂದು ಅದ್ಭುತ ಅಧ್ಯಾಯವು ಕೊನೆಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸುಷ್ಮಾ ಸ್ವರಾಜ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

“ಸುಷ್ಮಾ ಸ್ವರಾಜ್ ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದ್ದರು. ಸುಷ್ಮಾ ಅವರು ಅತ್ಯುತ್ತಮ ಸಂಸದೆಯಾಗಿದ್ದರು. ಕೇವಲ ಅವರು ಪಕ್ಷ ಮಾತ್ರವಲ್ಲ, ಅದರ ಆಚೆಗೂ ಸಹ ಮೆಚ್ಚುಗೆ ಪಡೆದವರು ಮತ್ತು ಗೌರವಿಸಲ್ಪಟ್ಟವರು. ಬಿಜೆಪಿಯ ಸಿದ್ಧಾಂತ ಮತ್ತು ಹಿತಾಸಕ್ತಿಗಳ ವಿಷಯಕ್ಕೆ ಬಂದಾಗ ಅವರು ರಾಜಿಯಾಗುತ್ತಿರಲಿಲ್ಲ. ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಅಪಾರವಾದದ್ದು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅಪ್ರತಿಮ ಸಂಸದೀಯ ಪಟುವಾಗಿದ್ದ ಸುಷ್ಮಾ ಅವರು, ಸರ್ಕಾರದ ಸಚಿವರಾಗಿ ಭಾರತದ ಸಂಬಂಧಗಳನ್ನು ಇತರೇ ದೇಶಗಳೊಂದಿಗೆ ಉತ್ತಮವಾಗಿಸಲು ಕಾರ್ಯನಿರ್ವಹಿಸಿದ್ದರು. ಅವರ ಅಗಲಿಕೆಯಿಂದ ನನಗೆ ವೈಯಕ್ತಿಕ ನಷ್ಟವಾಗಿದೆ. ಅವರೊಂದಿಗೆ ಕಾರ್ಯನಿರ್ವಹಿಸಿದ್ದ 5 ವರ್ಷದ ಅವಧಿ ಸ್ಮರಣೀಯವಾಗಿದ್ದು, ಅವರು ಅನಾರೋಗ್ಯದಿಂದಿದ್ದರೂ ಕೂಡ, ತಮ್ಮ ಕಾರ್ಯವನ್ನು ದೇಶಕ್ಕಾಗಿ ಮಾಡುತ್ತಿದ್ದರು ಎಂದು ಪ್ರಧಾನಿ ಮೋದಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಸುಷ್ಮಾ ಅತ್ಯುತ್ತಮ ಆಡಳಿತಾಧಿಕಾರಿ. ಅವರು ನಿರ್ವಹಿಸಿದ ಪ್ರತಿಯೊಂದು ಜವಾಬ್ದಾರಿಯೂ ಉನ್ನತ ಗುಣಮಟ್ಟದ್ದಾಗಿತ್ತು. ಹಾಗೂ ಅವರು ಅದರಲ್ಲಿ ಅತ್ಯಂತ ಕಾಳಜಿಯನ್ನು, ಶ್ರದ್ದೆಯನ್ನೂ ಹೊಂದಿದ್ದರು. ವಿವಿಧ ರಾಷ್ಟ್ರಗಳೊಂದಿಗಿನ ಭಾರತ ಸಂಬಂಧಗಳನ್ನು ಉತ್ತಮಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಚಿವರಾಗಿ ನಾವು ಆಕೆಯ ಸಹಾನುಭೂತಿಯ ಮುಖವನ್ನು ಕಂಡಿದ್ದೇವೆ. ವಿಶ್ವದ ಯಾವುದೇ ಭಾಗದಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ಪಾಲಿಗೆ ಸುಷ್ಮಾ ಅವರು ಸಹಾಯ ನೀಡದಿರುತ್ತಿರಲಿಲ್ಲ ಎಂದು ಹೇಳಿದ್ದಾರೆ.