ಭಾರತ ಬಂದ್ ವಿಫಲ : ಅಲ್ಲಲ್ಲಿ ಪ್ರತಿಭಟನೆ, ಬಲವಂತದ ಅಂಗಡಿ ಬಂದ್
ಬೆಂಗಳೂರು: ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರಕಾರದ ನೀತಿ ಖಂಡಿಸಿ 10 ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ವಿಫಲವಾಗಿದೆ.
ಕರ್ನಾಟಕದ ರಾಜದಾನಿ ಬೆಂಗಳೂರು ಸಹಿತ ಹಲವೆಡೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ರಕ್ಷಣೆಯ ಹೊರತಾಗಿಯೂ ರಸ್ತೆಗಿಳಿದ ಬಸ್ಗಳಿಗೆ ಕಲ್ಲು, ಪ್ರತಿಭಟನನಿರತ ಅಲ್ಲಲ್ಲಿ ಒತ್ತಾಯ ಪೂರ್ವಕವಾಗಿ ಅಂಗಡಿ-ಮುಂಗಟ್ಟುಗಳಿಗೆ ಬೀಗ ಮತ್ತಿತರ ಅಹಿತಕರ ಘಟನೆಗಳ ನಡುವೆ ಸಾರ್ವತ್ರಿಕ ಮುಷ್ಕರಕ್ಕೆ ನಿರೀಕ್ಷಿತ ಬೆಂಬಲ ವ್ಯಕ್ತವಾಗಲಿಲ್ಲ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿದ್ದ 2 ದಿನಗಳ ಮುಷ್ಕರಕ್ಕೆ ಸಾರಿಗೆ ನೌಕರರು ಕೈಜೋಡಿಸಿದ್ದರಿಂದ ಜನರ ‘ಸಂಚಾರ ನಾಡಿ’ ಭಾಗಶಃ ಸ್ತಬ್ಧಗೊಂಡಿತ್ತು. ಆಟೋಗಳ ಓಡಾಟ ವಿರಳವಾಗಿತ್ತು. ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ಮಂಕಾಗಿತ್ತು. ಶಾಲಾ-ಕಾಲೇಜುಗಳಿಗೆ ಮುಂಚಿತವಾಗಿಯೇ ರಜೆ ಘೋಷಿಸಲಾಗಿತ್ತು. ವಿಶ್ವವಿದ್ಯಾಲಯಗಳು ಕೂಡ ಪರೀಕ್ಷೆ ಮುಂದೂಡಿದ್ದವು. ಇವೆಲ್ಲದರಿಂದ ಭಾಗಶಃ ಜನಜೀವನ ಅಸ್ತವ್ಯಸ್ತಗೊಂಡಿತು.
ಬಂದ್ ವಿಫಲ ; ಎಡಪಕ್ಷಗಳಿಗೆ ಜನರೇ ಉತ್ತರ :ಸಿ.ಟಿ. ರವಿ
ಪ್ರಧಾನಿ ನರೇಂದ್ರಮೋದಿ ವಿರುದ್ಧ ಜನರನ್ನು ಎತ್ತಿಕಟ್ಟುವ ಷಡ್ಯಂತ್ರಗಳು ನಡೆಯುತ್ತಿದ್ದು, ಅದರ ಭಾಗವಾಗಿ ಕರೆ ನೀಡಿದ್ದ ಇಂದಿನ ಭಾರತ್ ಬಂದ್ ವಿಫಲವಾಗಿದೆ. ಜನ ಮೋದಿ ಸರ್ಕಾರವನ್ನು ಬೆಂಬಲಿಸಿದ್ದಕ್ಕೆ ರಾಜ್ಯ ಬಿಜೆಪಿ ಧನ್ಯವಾದ ಹೇಳಿದೆ.
ಬಿಜೆಪಿ ಕಛೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ, ಎಡ ಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್ ವಿಫಲವಾಗಿದೆ. ಮೋದಿ ಅವರ ವಿರುದ್ಧ ಷಡ್ಯಂತ್ರ ಮಾಡಿದ್ದ ಎಡ ಪಕ್ಷಗಳಿಗೆ ದೇಶದ ಜನ ಬಂದ್ ವಿಫಲಗೊಳಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದರು.
ಎಡಪಕ್ಷಗಳ ಜತೆ ಕೈಜೋಡಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೂ ಜನ ಈ ಮೂಲಕ ಪಾಠ ಕಲಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎಡ ಪಕ್ಷಗಳಿಗೆ ಪರಾವಂಭಿಯಾಗಿದೆ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದರು.
ಒಂದು ಕಡೆ ಜಾತಿಯನ್ನೇ ಎತ್ತಿಕಟ್ಟಿ ಹೋರಾಟ ಮಾಡಿಸುವವರೆ ಈ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಪರೋಕ್ಷವಾಗಿ ಕಾಂಗ್ರೆಸ್ ಸೇರಿದಂತೆ ದೇಶದ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಜಾತಿ ಜಾತಿಗಳನ್ನೇ ಎತ್ತಿಕಟ್ಟಿ ಮೀಸಲಾತಿ ಹೋರಾಟ ಮಾಡುತ್ತಿದ್ದವರಿಗೆ ಈಗ ಪ್ರಧಾನಿ ಮೋದಿ ಉತ್ತರ ಕೊಟ್ಟಿದ್ದಾರೆ. ಯಾರದೇ ಮೀಸಲಾತಿ ಕಸಿದುಕೊಳ್ಳದೆ ಎಲ್ಲ ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸುವ ಡಾ.ಬಿ. ಆರ್. ಅಂಬೇಡ್ಕರ್ ಆಶಯದಂತೆ ಮೋದಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
