ಭಾರಿ ಬಹುಮತದಿಂದ ಬಿಜೆಪಿ ಮರಳಿ ಅಧಿಕಾರಕ್ಕೆ ; ಇನ್ನೂ50 ವರ್ಷ ಭಾರತವನ್ನು ಆಳಲಿದೆ; ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ : ಅಮಿತ್‌ ಶಾ

Featured, ರಾಷ್ಟ್ರ ನ್ಯೂಸ್
ನವದೆಹಲಿ: ಬಿಜೆಪಿ ಇನ್ನೂ 50 ವರ್ಷ ಭಾರತವನ್ನು ಆಳಲಿದೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಹಗಲುಗನಸು. ಭಾರಿ ಬಹುಮತದೊಂದಿಗೆ ಪಕ್ಷವು ಮರಳಿ ಅಧಿಕಾರಕ್ಕೆ ಬರಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

2022ರ ವೇಳೆಗೆ ನವ ಭಾರತ ನಿರ್ಮಾಣ ಮಾಡುವ ತನ್ನ ವಚನಕ್ಕೆ ಪಕ್ಷ ಬದ್ಧವಾಗಿರುವುದಾಗಿ ರಾಷ್ಟ್ರೀಯ ಕಾರ್ಯಕಾರಿಣಿ ರಾಜಕೀಯ ನಿರ್ಣಯ ಕೈಗೊಂಡಿದೆ. ಬಡತನ, ಹಸಿವು, ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಮತ್ತು ಭಯೋತ್ಪಾದನೆ ಮುಕ್ತವಾದ ‘ನವ ಭಾರತ ನಿರ್ಮಾಣ’ ನಮ್ಮ ಗುರಿ ಎಂದು ಹೇಳಿದ್ದಾರೆ.

ಅಜೇಯ ಭಾರತ, ಅಟಲ್‌ ಭಾಜಪ : ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ‘ಅಜೇಯ ಭಾರತ, ಅಟಲ್‌ ಭಾಜಪ’ ಎಂಬ ಹೊಸ ಮಂತ್ರ ಜಪಿಸಿದೆ. ಎರಡನೇ ದಿನದ ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿ ಅವರು ಈ ಹೊಸ ಘೋಷಣೆ ಹುಟ್ಟು ಹಾಕಿದ್ದಾರೆ.

ಮೊದಲ ದಿನದ ಕಾರ್ಯಕಾರಿಣಿಯಲ್ಲಿ ‘ಅಜೇಯ ಬಿಜೆಪಿ’ ಎಂಬ ಧ್ಯೇಯವಾಕ್ಯವನ್ನು ಘೋಷಿಸಲಾಗಿತ್ತು. ಅದಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರು ಸೇರಿಸುವ ಮೂಲಕ ಮೋದಿ ಅವರು ಧ್ಯೇಯವಾಕ್ಯವನ್ನು ಸ್ವಲ್ಪ ಮಾರ್ಪಾಡು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತ್ತೆ ವಾಜಪೇಯಿ ಅವರ ಹೆಸರಿಗೆ ಮೊರೆ ಹೊಗುವ ಸುಳಿವನ್ನು ಬಿಜೆಪಿ ನೀಡಿದೆ.

ನವ ಭಾರತ ನಿರ್ಮಾಣ: 2022ರ ವೇಳೆಗೆ ನವ ಭಾರತ ನಿರ್ಮಾಣ ಮಾಡುವ ತನ್ನ ವಚನಕ್ಕೆ ಬದ್ಧವಾಗಿರುವುದಾಗಿ ರಾಷ್ಟ್ರೀಯ ಕಾರ್ಯಕಾರಿಣಿ ರಾಜಕೀಯ ನಿರ್ಣಯ ಕೈಗೊಂಡಿದೆ.ಬಡತನ, ಹಸಿವು, ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಮತ್ತು ಭಯೋತ್ಪಾದನೆ ಮುಕ್ತವಾದ ‘ನವ ಭಾರತ ನಿರ್ಮಾಣ’ ತನ್ನ ಕನಸು ಎಂದು ಬಿಜೆಪಿ ಪುನರುಚ್ಚರಿಸಿದೆ.

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ, ಕುಸಿಯುತ್ತಿರುವ ರೂಪಾಯಿ ಮೌಲ್ಯ, ಹೆಚ್ಚುತ್ತಿರುವ ನಿರುದ್ಯೋಗ, ರಫೇಲ್‌ ಯುದ್ಧ ವಿಮಾನ ಹಗರಣದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪವಾಗದಿರುವುದು ಆಶ್ಚರ್ಯ ಮೂಡಿಸಿದೆ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಒಣ ಘೋಷಣೆಗಳು ಮಾತ್ರ ಕೇಳಿ ಬರುತ್ತಿವೆ.

ದೇಶ ಮತ್ತು ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯಾಗದಿರುವುದು ವಿಷಾದನೀಯ ಎಂದು ಕಾಂಗ್ರೆಸ್‌ ವಕ್ತಾರ ಅಜಯ್‌ ಮಾಕನ್‌ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲ್‌, ಡೀಸೆಲ್‌ ದರ ಏರಿಕೆ, ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣಗಳ ಕುರಿತು ಕೇಳಿದ ಪ್ರಶ್ನೆಗೆ ಸಚಿವರಾದ ಜಾವಡೇಕರ್‌, ರವಿಶಂಕರ್‌ ಪ್ರಸಾದ್‌ ಅವರು ಉತ್ತರಿಸದೆ ನುಣುಚಿಕೊಂಡಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

ನಮಗೆ ಅಧಿಕಾರ ಆಸೆಯಾಗಲಿ, ದಾಹವಾಗಲಿ ಇಲ್ಲ. ಕುರ್ಚಿಯ ವ್ಯಾಮೋಹ ಕೂಡ ಇಲ್ಲ. ದೇಶ ಮತ್ತು ಜನರಿಗಾಗಿ ಕೆಲಸ ಮಾಡಲು ಅಧಿಕಾರ ಬೇಕು. ಅದಕ್ಕೆ ನಮಗೆ ಜನ ಅವಕಾಶ ನೀಡಿದ್ದಾರೆ. ಆ ನಂಬಿಕೆಯಿಂದ ಕೊಟ್ಟ ಅಧಿಕಾರವನ್ನ ಹುಸಿಗೊಳಿಸಬಾರದು  :  ನರೇಂದ್ರ ಮೋದಿ, ಪ್ರಧಾನಿ