ಭೀಕರ ಅಪಘಾತ : ಇಬ್ಬರ ದುರ್ಮರಣ ; ಅಪಘಾತ ತೀವ್ರತೆಗೆ ನಜ್ಜುಗುಜ್ಜಾದ ಕಾರು, ಗಾಯಾಳುಗಳ ಹೊರತೆಗೆಯಲು ಸ್ಥಳೀಯರ ಹರಸಾಹಸ
ಉಡುಪಿ : ಖಾಸಗಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಮೃತಪಟ್ಟು , ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ಅಂಪಾರು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಕುಂದಾಪುರ ತಾಲೂಕಿನ ಹೊಸ್ಮರ ನಿವಾಸಿ ಕಿರಣ ಶೆಟ್ಟಿ (23) ಹಾಗೂ ಮಲ್ಯಾಡಿ ಮೂಲದ ದೀಕ್ಷಿತ್ ಶೆಟ್ಟಿ (23) ಎಂದು ಗುರುತಿಸಲಾಗಿದೆ, ಗಾಯಗೊಂಡ ಅರುಣ . ಮನೀಷ್ , ಜೀವನ್ ಎಂಬುವವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ
ಕಿರಣ್ ಹಾಗೂ ಸ್ನೇಹಿತರು ಎರಡು ಕಾರುಗಳಲ್ಲಿ ಸಿದ್ದಾಪುರ ಸಮೀಪದ ತೊಂಭಟ್ಟುವಿನ ಜಲಪಾತ ವೀಕ್ಷಿಸಿ ವಾಪಸ್ ಬರುತ್ತಿರುವ ವೇಳೆ ನೆಲ್ಲಿಕಟ್ಟೆಯ ರಾಜ್ಯ ಹೆದ್ದಾರಿಯಲ್ಲಿ ಕುಂದಾಪುರದಿಂದ ಸಿದ್ದಾಪುರ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ದೀಕ್ಷಿತ್ ಸ್ಥಳದಲ್ಲಿಯೇ ಮೃತಪಟ್ಟರೆ ಕಿರಣ್ ಮಣಿಪಾಲಕ್ಕೆ ಕೊಂಡೊಯ್ಯುವ ದಾರಿ ಮಧ್ಯೆ ಅಸು ನೀಗಿದ್ದಾರೆ. ಅಪಘಾತ ತೀವ್ರತೆಗೆ ಕಾರು, ಬಸ್ಸು ಜಖಂಗೊಂಡಿದೆ. ಅಪಘಾತ ನಡೆದಾಗ ಸ್ಥಳೀಯ ಯುವಕರು ರಕ್ಷಣೆಗೆ ಧಾವಿಸಿದ್ದಾರೆ. ಚರಂಡಿಗೆ ಬಿದ್ದ ಕಾರನ್ನು ಮೇಲೆತ್ತಿ, ಕಬ್ಬಿಣದ ಸಲಾಕೆ ಬಳಸಿ ಗಾಯಾಳು ಗಳನ್ನು ಕಾರಿನಿಂದ ಕಷ್ಟಪಟ್ಟು ಹೊರ ತೆಗೆದು ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.

