ಭೀಕರ ರಸ್ತೆ ಅಪಘಾತ : ತಂದೆ ಮಗ ಸ್ಥಳದಲ್ಲೇ ದಾರುಣ ಸಾವು

Featured, ರಾಜ್ಯ ನ್ಯೂಸ್

ಬೆಂಗಳೂರು: ಕಾರು-ಬೈಕ್ ಡಿಕ್ಕಿಯಿಂದಾದ ಭೀಕರ ರಸ್ತೆ ಅಪಘಾತದಲ್ಲಿ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು ಬೈಕಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಭೀಕರ ಅಪಘಾತ ಸಂಭವಿಸಿ, ತಂದೆ ಮಗ ಇಬ್ಬರೂ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಅವಲಹಳ್ಳಿ ಫ್ಲೈ ಓವರ್ ಮೇಲೆ ನಡೆದಿದೆ.

ಕೆ.ಆರ್.ಪುರಂ ದೇವಸಂದ್ರ ನಿವಾಸಿ ಬ್ರಹ್ಮಾನಂದ ರೆಡ್ಡಿ(43) ಹಾಗೂ ಅವರ 18 ವರ್ಷದ ಮಗ ಮೃತರು ಎಂದು ತಿಳಿದು ಬಂದಿದೆ. ಮಗನ ಅನಾರೋಗ್ಯದ ಹಿನ್ನೆಲೆ ಕೆ.ಆರ್.ಪುರಂನಿಂದ ಹೊಸಕೋಟೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅವಲಹಳ್ಳಿ ಫ್ಲೈ ಓವರ್ ಮೇಲೆ ವೇಗವಾಗಿ ಬಂದ ಕಾರು ಬ್ರಹ್ಮಾನಂದ ರೆಡ್ಡಿ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಗನ ದೇಹ ಫ್ಲೈ ಓವರ್ ತಡೆಗೋಡೆಗೆ ಬಡಿದು ಎರಡು ತುಂಡಾಗಿದ್ದು, ಬ್ರಹ್ಮಾರೆಡ್ಡಿ ಸಹ ರಸ್ತೆ ಮೇಲೆ ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅವಲಹಳ್ಳಿ ಪೋಲಿಸರು ಭೇಟಿ ನೀಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..