ಮಂಗಳೂರು: ದೇಶದ ವಿಷಯಗಳಲ್ಲಿ ಒಟ್ಟಾಗಿ ನಿಲ್ಲಬೇಕೇ ಹೊರತು ರಾಜಕೀಯ ಮಾಡಬಾರದು : ದಿನೇಶ್ ಗುಂಡೂರಾವ್ – Vishwanews24
ಮಂಗಳೂರು: ದೇಶದ ವಿಷಯಗಳಲ್ಲಿ ಒಟ್ಟಾಗಿ ನಿಲ್ಲಬೇಕೇ ಹೊರತು ರಾಜಕೀಯ ಮಾಡಬಾರದು : ದಿನೇಶ್ ಗುಂಡೂರಾವ್
ಮಂಗಳೂರು: ವಿಧಾನ ಸೌದದಲ್ಲಿ ಪಾಕಿಸ್ತಾನ ಘೋಷಣೆ, ಬೆಂಗಳೂರು ಸ್ಫೋಟ ಮೊದಲಾದ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಆದರೆ ಇಂತಹ ವಿಷಯಗಳಲ್ಲಿ ಒಟ್ಟಾಗಿ ನಿಲ್ಲಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡೂ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದಕ್ಕೂ ಮೊದಲೇ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳತೊಡಗಿದೆ. ಇದು ದೇಶದ ಹಿತ ದೃಷ್ಟಿಯಿಂದ ಮಾರಕ ಎಂದು ಅವರು ಹೇಳಿದರು.
ಇಂತಹ ದೇಶದ್ರೋಹದ ಚಟುವಟಿಕೆಗಳಿಗೆ ಯಾರಾದರೂ ಪ್ರೋತ್ಸಾಹ ನೀಡುತ್ತಾರಾ ಎಂದು ಪ್ರಶ್ನಿಸಿದ ಗುಂಡೂರಾವ್, ಇಂತಹ ಘಟನೆ ಮುಂದಿಟ್ಟು ಪ್ರಚೋದಿಸುವ ಅಗತ್ಯವಿಲ್ಲ ಎಂದರು.
ಇದು ಸರಕಾರದ ವೈಫಲ್ಯ ಅಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ಈ ಹಿಂದಿನ ಸರಕಾರದ ಅವಧಿಯಲ್ಲೂ ಈ ರೀತಿಯ ಘಟನೆಗಳು ನಡೆದಿವೆ. ಪುಲ್ವಾಮ ಘಟನೆಯಾದಾಗ ಯಾವ ಸರಕಾರವಿತ್ತು. ಯೋಧರು ಹುತಾತ್ಮರಾಗಿದ್ದು ಹೇಗೆ? ಭಾರೀ ಪ್ರಮಾಣದ ಆರ್ಡಿಎಕ್ಸ್ ಹೇಗೆ ಒಳಗೆ ಬಂತು ಎಂದು ಪ್ರಶ್ನಿಸಿದರು.
