ಮಂಗಳೂರು: ಪೌರತ್ವ ಕಾಯಿದೆ ವಿರುದ್ದ ಬೃಹತ್ ಸಮಾವೇಶದಲ್ಲಿ ಮೈದಾನದಲ್ಲಿ ಹಾರಾಡಿದ ತ್ರಿವರ್ಣ ಧ್ವಜ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕೇಂದ್ರದ ಪೌರತ್ವ ಕಾಯಿದೆ ವಿರುದ್ದ ಮಂಗಳೂರಿನಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಮಂಗಳೂರು ನಗರ ಹೊರವಲಯದ ಅಡ್ಯಾರ್ ಮೈದಾನದಲ್ಲಿ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಶಕ್ತಿ ಪ್ರದರ್ಶನ ಮಾಡಿದ್ದು, ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಡ್ಯಾರ್ ಮೈದಾನದ ತುಂಬಾ ತ್ರಿವರ್ಣ ಧ್ವಜ ಹಾರಾಡಿದ್ದು,‌ಪೌರತ್ವ ಕಾಯಿದೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಗೋಲಿಬಾರ್ ಪ್ರಕರಣದ ನಂತರ ಮೊದಲ ಬಾರಿಗೆ ಮಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆದಿದ್ದು, ಪೊಲೀಸರ ವಿರುದ್ಧವೂ ಫ್ಲೇ ಕಾರ್ಡ್ ಪ್ರದರ್ಶನ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ.ಪಿ ಎಸ್ ಹರ್ಷ ವಿರುದ್ಧವೂ ಸಮಾವೇಶ ದಲ್ಲಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನ3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆದಿದ್ದು,ಕೇಂದ್ರದ ವಿರುದ್ದ ಗುಡುಗಿದ್ದಾರೆ. ಮಾಜಿ‌ IAS ಅಧಿಕಾರಿ, ಹರ್ಷ ಮಂದರ್, ಕೇರಳದ ಕಣ್ಣನ್ ಗೋಪಿನಾಥನ್ ಸೇರಿದಂತೆ ಮುಸ್ಲಿಂ ಸಂಘಟನೆಗಳ ಪ್ರಮುಖರು ಭಾಷಣ ಮಾಡಿ ಜನಾಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಸಂಘಟನೆಗಳ ಬೃಹತ್ ಸಮಾವೇಶದ ಹಿನ್ನಲೆ ಮಂಗಳೂರು ನಗರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಕಾನೂನು ಸುವ್ಯವಸ್ಥೆ ವಿಭಾಗದ ADGP ಅಮರ್ ಕುಮಾರ್ ಪಾಂಡೆ ಮಂಗಳೂರಿನಲ್ಲೇ ಬೀಡು ಬಿಟ್ಟಿದ್ದು, ಒಟ್ಟು 5 ಸಾವಿರ ಪೊಲೀಸರಿಂದ ಭಧ್ರತೆ ನೀಡಲಾಗಿತ್ತು.

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ75ಕ್ಕೆ ತಾಗಿಕೊಂಡಿರುವ ಮೈದಾನದಲ್ಲಿ ಕಾರ್ಯಕ್ರಮ ನಡೆದಿದ್ದು, ಮಧ್ಯಾಹ್ನದ ನಂತರ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧ ಮಾಡಲಾಗಿತ್ತು. ಕೇರಳದಿಂದ ಪ್ರತಿಭಟನೆಗೆ ಕಿಡಿಗೇಡಿಗಳು ಬರುವ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು, ರೈಲ್ವೇ ನಿಲ್ದಾಣ, ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.‌ ಅಲ್ಲದೆ ನದಿಯಲ್ಲಿ ತೆಪ್ಪದ ಮೂಲಕವೂ ಬರುವ ಸುಳಿವು ಇದ್ದಿದ್ದರಿಂದ ನೇತ್ರಾವತಿ ನದಿ ದಡದಲ್ಲೂ ಪೊಲೀಸರು ಪಹರೆ ಕಾದಿದ್ದಾರೆ.

ಒಟ್ಟಿನ್ನಲ್ಲಿ ಪೊಲೀಸರ ತಲೆನೋವಾಗಿದ್ದ ಮುಸ್ಲಿಂ ಸಂಘಟನೆಗಳ ಪ್ರತಿಭಟನಾ ಸಮಾವೇಶ ಶಾಂತವಾಗಿ ನಡೆದಿದ್ದು ಪೊಲೀಸರು ನಿರಳರಾಗಿದ್ದಾರೆ‌‌.