ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು: ಶಾಸಕರಿಂದ ಸಿ.ಎಂ. ಗೆ ಮನವಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು: ಶಾಸಕರಿಂದ ಸಿ.ಎಂ. ಗೆ ಮನವಿ -Vishwanews24

ಕೇಂದ್ರ ಸರ್ಕಾರ‌ಕ್ಕೆ ಶಿಫಾರಸ್ಸು ಸಲ್ಲಿಸುವ ಭರವಸೆ : ಜೆ. ಸಿ. ಮಾಧುಸ್ವಾಮಿ

ಬೆಂಗಳೂರು: ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಸೂಚಿಸಿ ಕೇಂದ್ರ ಸರ್ಕಾರ‌ಕ್ಕೆ ಶಿಫಾರಸ್ಸು ಸಲ್ಲಿಸುವ ಭರವಸೆಯನ್ನು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ನೀಡಿದ್ದಾರೆ.

ಈ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ವೀರರಾದ ಕೋಟಿ ಚೆನ್ನಯರು ಹೆಸರನ್ನು ಇರಿಸುವ ಬೇಡಿಕೆ ಕರಾವಳಿ ಭಾಗದಲ್ಲಿ ಬಹು ಹಿಂದಿನಿಂದ‌ಲೇ ಕೇಳಿ ಬರುತ್ತಿತ್ತು. ಈ ವಿಮಾನ ನಿಲ್ದಾಣ ಅಧಾನಿ ಸಂಸ್ಥೆಯ ವ್ಯಾಪ್ತಿಗೆ ಸೇರಿದ ಬಳಿಕ ಈ ನಿಲ್ದಾಣ‌ದ ಹೆಸರು ಬದಲಾವಣೆಯ ಕೂಗು ಹೆಚ್ಚಾಗಿದೆ. ಹಾಗೆಯೇ ಕೋಟಿ ಚೆನ್ನಯರ ಹೆಸರು ಸೇರಿದಂತೆ ಇನ್ನೂ ಅನೇಕ ಹೆಸರುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಗಮನವನ್ನು ಸೆಳೆದಿರುವ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಅವರು, ಈ ವಿಮಾನ ನಿಲ್ದಾಣ‌ಕ್ಕೆ ಕೋಟಿ ಚೆನ್ನಯ ವಿಮಾನ ನಿಲ್ದಾಣ ಎಂದು ಹೆಸರನ್ನಿಡುವಂತೆ ಪ್ರಸ್ತಾಪ ಸಲ್ಲಿಸಿದ್ದಾರೆ. ಅಧಿವೇಶನ‌ದ ಶೂನ್ಯ ವೇಳೆಯಲ್ಲಿ ಅವರು ಈ ವಿಚಾರ‌ವನ್ನು ಪ್ರಸ್ತಾಪ ಮಾಡಿದ್ದಾರೆ. ಕೋಟಿ ಚೆನ್ನಯರ ಹೆಸರನ್ನಿಡುವಂತೆ ಆಗ್ರಹಿಸಿ ಕರಾವಳಿ‌ಯ ಕೆಲವೆಡೆ ಸಮಾವೇಶ‌ಗಳು ನಡೆಯುತ್ತಿರುವುದನ್ನು ಸರ್ಕಾರ‌ದ ಗಮನಕ್ಕೆ ತಂದಿದ್ದಾರೆ.

ಉಮಾನಾಥ ಕೋಟ್ಯಾನ್ ಅವರ ಪ್ರಸ್ತಾಪ‌ಕ್ಕೆ ಶಾಸಟ ಹರೀಶ್ ಪೂಂಜ, ವೇದವ್ಯಾಸ ಕಾಮತ್ ಮೊದಲಾದವರು ಸಹಮತ ಸೂಚಿಸಿದ್ದಾರೆ.