ಮಂಗಳೂರು: ಸಿಟಿ ಬಸ್‌ನಲ್ಲಿ ತುಳು ಲಿಪಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬುದಕ್ಕೆ ಬೆಂಬಲ ನೀಡಿ ಸಿಟಿ ಬಸ್‌ನಲ್ಲಿ ತುಳು ಲಿಪಿ ಹಾಕಲಾಗಿದೆ. ಬಸ್‌ನಲ್ಲಿಯೂ ತುಳು ಲಿಪಿ ಪ್ರೀತಿ ವ್ಯಕ್ತವಾಗಿದ್ದು ಈ ಬಸ್‌ ಈಗ ಎಲ್ಲರ ಗಮನ ಸೆಳೆದಿದೆ.

ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಿಂದ ಅತ್ತಾವರ ಮಾರ್ಗವಾಗಿ ಮಂಗಳಾದೇವಿಗೆ ತೆರಳುವ ಗಣೇಶ್‌ ಪ್ರಸಾದ್‌ (ರೂಟ್‌ ನಂ:27) ಎಂಬ ಹೆಸರಿರುವ ಈ ಬಸ್‌ನ ಮಾಲಿಕರು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು.

ಈ ಬಸ್‌ಗೆ ಇತ್ತೀಚೆಗೆ ಪೈಂಟಿಂಗ್‌ ಮಾಡಲಾಗಿದ್ದು ಆ ಸಮಯದಲ್ಲಿ ಬಸ್‌ನ ಎರಡೂ ಬದಿಗಳಲ್ಲಿ ಬಸ್‌ನ ಹೆಸರು ಅಥವಾ ರೂಟ್‌ ಬರೆಯುವ ಬದಲಿಗೆ ತುಳು ಲಿಪಿ ಅ ದಿಂದ ಅಃ ವರೆಗೆ ಬರೆದಿದ್ದು, ಪಕ್ಕದಲ್ಲಿಯೇ ಹ್ಯಾಶ್‌ ಟ್ಯಾಗ್‌ ಮುಖೇನ #TuluTo8thSchedule #TuluofficiallnKA_KL ಎಂದು ಬರೆಯಲಾಗಿದೆ.

ದಿಲ್‌ ರಾಜ್‌ ಆಳ್ವ ಅವರ ಮಾಲಕತ್ವದಲ್ಲಿ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಿಂದ ಅತ್ತಾವರ ಮುಖೇನ ಮಂಗಳಾದೇವಿಗೆ ತೆರಳುವ ಐದು ಬಸ್‌ಗಳಿದ್ದು ಈ ಮೊದಲೇ ಆ ಬಸ್‌ಗಳಿಗೆ ವಿಶೇಷ ರೀತಿಯಲ್ಲಿ ಪೈಟಿಂಗ್‌ ಮಾಡಿದ್ದಾರೆ.

ಈ ಬಸ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್‌ ಆಗಿದ್ದು ಮಂಗಳೂರಿನ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.