ಮಂಗಳೂರು: 2021-22ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: 2021-22ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ – Vishwanews24

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಸಿದ್ಧತೆ ಭರದಿಂದ ಸಾಗುತ್ತಿದೆ. ಕುದಿ ಕಂಬಳಗಳು ಅಲ್ಲಲ್ಲಿ ನಡೆಯುತ್ತಿದ್ದು, ಈಗ ಕರೆಗಳ ದುರಸ್ತಿ ಕೆಲಸಗಳಿಗೂ ಚಾಲನೆ ನೀಡಲಾಗಿದೆ.

ಮಂಗಳವಾರ ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಮಂಗಳೂರಿನಲ್ಲಿ ಸಭೆ ಸೇರಿದ ಕಂಬಳ ಪ್ರಮುಖರು ಸ್ಥಳೀಯ ಸಮಿತಿಗಳ ಮುಖ್ಯಸ್ಥರೊಡನೆ ಸಮಾಲೋಚನೆ ನಡೆಸಿ, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಕಂಬಳ ನಡೆಸಲು ದಿನಾಂಕ ನಿಗದಿ ಮಾಡಿದ್ದಾರೆ. ಇದರಂತೆ ನ.27ರಿಂದ 2020ರ ಮಾರ್ಚ್ 26ರ ವರೆಗೆ ಒಟ್ಟು 17 ಕಂಬಳ ಕೂಟಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮೊದಲ ಕಂಬಳ ಮೂಡುಬಿದಿರೆಯಲ್ಲಿ ಹಾಗೂ ಕೊನೆಯ ಕಂಬಳ ವೇಣೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ವೇಳಾಪಟ್ಟಿ ಪ್ರಕಟಗೊಂಡಿದ್ದರೂ, ಕೆಲವು ಕಂಬಳಗಳ ದಿನಾಂಕಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ.

ಇನ್ನೊಂದೆಡೆ ತಲಪಾಡಿ ಸೂರ್ಯಚಂದ್ರ ಜೋಡುಕರೆ ಕಂಬಳ ಇತಿಹಾಸದ ಪುಟಗಳಿಗೆ ಸೇರುತ್ತಿದೆ. ಜಮೀನು ತಕರಾರಿನಿಂದಾಗಿ ಇಲ್ಲಿ ಈ ವರ್ಷವೂ ಕಂಬಳ ನಡೆಯುತ್ತಿಲ್ಲ. ಕಾಸರಗೋಡಿನ ಪೈವಳಿಕೆ ಕಂಬಳಕ್ಕೆ ದಿನಾಂಕ ನಿಗದಿಯಾಗಿದ್ದರೂ, ಕೇರಳದ ಕೋವಿಡ್-19 ಸ್ಥಿತಿಗತಿಯನ್ನು ಅವಲಂಬಿಸಿದೆ.

ಸಮಿತಿ ಮಹಾಸಭೆ: ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಕಂಬಳ ಸಮಿತಿಯ ಮಹಾಸಭೆ ನಡೆಯಲಿದೆ. ಈ ವೇಳೆ ಹೊಸದಾಗಿ ಕಂಬಳ ಸಮಿತಿ ರಚನೆಯಾಗುವ ಅಥವಾ ಹಾಲಿ ಸಮಿತಿಯನ್ನೇ ಮುಂದುವರಿಸುವ ಕುರಿತು ನಿರ್ಣಯವಾಗಲಿದೆ. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಕಂಬಳ ಶಿಸ್ತು ಸಮಿತಿಯ ರೂಪುರೇಷೆಯೂ ಇದೇ ವೇಳೆ ಅಂತಿಮಗೊಳ್ಳಲಿದೆ.

ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಈ ಬಾರಿ ಕಂಬಳ ಆಯೋಜಿಸುವ ನಿಟ್ಟಿನಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಒಟ್ಟು 17 ಕಂಬಳ ಕೂಟ ಆಯೋಜನೆಗೊಳ್ಳಲಿದ್ದು, ಅನಿರೀಕ್ಷಿತ ಬದಲಾವಣೆ ಹೊರತುಪಡಿಸಿ ಇದೇ ಅಂತಿಮ ಎನ್ನಬಹುದು.
ಪಿ.ಆರ್.ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ

ಕಂಬಳ ವೇಳಾಪಟ್ಟಿ:
ನ.27 ಮೂಡುಬಿದಿರೆ
ಡಿ.11 ಹೊಕ್ಕಾಡಿ
ಡಿ.18 ಮಂಗಳೂರು
ಡಿ.26 ಮೂಲ್ಕಿ
ಜ.1 ಕಕ್ಕೆಪದವು
ಜ.8 ಅಡ್ವೆ ನಂದಿಕೂರು
ಜ.16 ಮಿಯ್ಯರು
ಜ.22 ಪುತ್ತೂರು
ಜ.29 ಐಕಳ
ಫೆ.5 ಬಾರಾಡಿ
ಫೆ.12 ಜೆಪ್ಪು
ಫೆ.19 ವಾಮಂಜೂರು
ಫೆ.26 ಪೈವಳಿಕೆ
ಮಾ.5 ಕಟಪಾಡಿ
ಮಾ.12 ಉಪ್ಪಿನಂಗಡಿ
ಮಾ.19 ಬಂಗಾಡಿ
ಮಾ.26 ವೇಣೂರು

ಬಿಜೆಪಿ ಅವರ ಆರ್‌ಎಸ್‌ಎಸ್‌ ಶಾಖೆ ನನಗೆ ಬೇಡ , ನಾನು ಇಲ್ಲಿ ಬಡವರ ಬಗ್ಗೆ ಕಲಿತ ಶಾಖೆ ಸಾಕು : ಹೆಚ್‌ ಡಿ ಕುಮಾರಸ್ವಾಮಿ – VIshwanews24