ಮಂಡ್ಯ ಲೋಕಸಭಾ ಚುನಾವಣೆ – ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ : ಸುಮಲತಾ ಅಂಬರೀಶ್ – Vishwanews24
ಬೆಂಗಳೂರು, : ‘ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ನಟಿ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲೊಂದರಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ಅವರು, ಚುನಾವಣೆಗೆ ಸ್ಪರ್ಧೆ ಕುರಿತಂತೆ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿದರು. ‘ಅಂಬರೀಶ್ ಎಂದಿಗೂ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಲ್ಲ. ಅವರು ಯಾವತ್ತೂ ನಾನು, ನನ್ನ ಕುಟುಂಬ ಎನ್ನಲಿಲ್ಲ. ಅವರು ಅಧಿಕಾರದಲ್ಲಿದ್ದಾಗ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗಬೇಕಿದೆ. ಇದು ಅವರ ಅಭಿಮಾನಿಗಳ ಒತ್ತಾಸೆ ಕೂಡಾ ಆಗಿದೆ. ನನ್ನ ಈ ನಿರ್ಧಾರ ಹಲವರಿಗೆ ಇಷ್ಟವಾಗದೆ ಇರಬಹುದು. ಆದರೆ ಅಂಬರೀಶ್ ಅವರ ಕನಸನ್ನು ನನಸು ಮಾಡಬೇಕಾಗಿದೆ’ ಎಂದರು.
ಅಂಬರೀಶ್ ಗೆ ಯಾವಾಗಲೂ ಸ್ನೇಹಿತರಿರುತ್ತಿದ್ದರು. ಅವರು ಎಂದೂ ತನ್ನ ಕುಟುಂಬ ತಾನು ಎಂದು ಹೇಳಿತ್ತಿರಲಿಲ್ಲ. ಅಂಬಿ ರಾಜಕೀಯದಲ್ಲಿ ನಾನು ಯಾವತ್ತು ಭಾಗಿಯಾಗಿರಲಿಲ್ಲ. ಅಂಬಿ ಮೇಲೆ ಜನ ಇಟ್ಟಿರುವ ವಿಶ್ವಾಸ, ಪ್ರೀತಿ ಉಳಿಸಬೇಕು. ಹೀಗಾಗಿ ಸ್ಪರ್ಧೆ ಮಾಡಲು ಮುಂದಾಗಿದ್ದೇನೆ ಹೊರೆತು ಯಾವುದೇ ದ್ವೇಷದಿಂದ ಅಲ್ಲ. ಮಂಡ್ಯ ಜನರಿಗಾಗಿ, ಅಂಬಿ ಅಭಿಮಾನಿಗಳಿಗಾಗಿ ಈ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಜೀವನದಲ್ಲಿ ಕೆಲವು ಕ್ಷಣವನ್ನು ನಾವು ಹುಡುಕಿಕೊಂಡು ಹೋಗಿ ಏನೇನು ಮಾಡಬೇಕೆನ್ನುವ ನಿರ್ಧಾರ ಮಾಡುತ್ತೇವೆ. ಆದರೆ ಒಂದೊಂದು ಸಲ ಆ ಕ್ಷಣಗಳೇ ನಮ್ಮನ್ನು ಹುಡುಕಿಕೊಂಡು ಬಂದು ಅದೇ ನಿರ್ಧಾರ ಮಾಡುತ್ತದೆ. ಈಗ ಆ ಸಮಯ ಬಂದಿದೆ ಎಂದು ಹೇಳಿದರು.
‘ನೆಮ್ಮದಿಯ ಜೀವನ ಸಾಗಿಸಲು ನಮಗೆ ಯಾವ ಕೊರತೆಯೂ ಇಲ್ಲ. ಆದರೆ ನನಗೂ ನನ್ನ ನಿರ್ಧಾರ ಪ್ರಕಟಿಸಲು ಇದು ಸೂಕ್ತ ಸಮಯವಾಗಿದೆ. ಚುನಾವಣೆ ಎದುರಿಸಲು ಸಾಕಷ್ಟು ಧೈರ್ಯ ಬೇಕು. ಸ್ಯಾಂಡಲ್ ವುಡ್ ನ ಸಂಪೂರ್ಣ ಬೆಂಬಲ ಹಾಗೂ ಮಂಡ್ಯದ ಜನತೆ ಸದಾ ನನ್ನ ಜೊತೆಗಿರುತ್ತಾರೆ ಎಂಬ ವಿಶ್ವಾಸದಿಂದ ನನ್ನ ಅಂತಿಮ ನಿರ್ಧಾರ ಪ್ರಕಟಿಸಿದ್ದೇನೆ’ ಎಂದರು.
ಈ ವೇಳೆ ನಟ ಯಶ್, ದರ್ಶನ್, ಅಭಿಷೇಕ್, ದೊಡ್ಡಣ್ಣ, ಜೈಜಗದೀಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರು ಗಣ್ಯರು ಸಾಥ್ ನೀಡಿದ್ದರು.
