ಮಾ.3ರಿಂದ 31ರವರೆಗೆ ರಾಜ್ಯ ಬಜೆಟ್ ಅಧಿವೇಶನ : ಮೀಡಿಯಾ ಕ್ಯಾಮರ ಬ್ಯಾನ್ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಮಾ.3ರಿಂದ 31ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, 25 ದಿನ ನಡೆಯುವ ಅಧಿವೇಶನದಲ್ಲಿ ಹಲವು ಬಿಲ್​ಗಳು ಮಂಡನೆಯಾಗಲಿವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಧಾನಸಭಾಧ್ಯಕ್ಷ, ಮಾ.5ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ ಎಂದರು. ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕ ಸೇರಿ 6 ವಿಧೇಯಕಗಳ ಮಂಡನೆಯಾಗಲಿದೆ ಎಂದು ತಿಳಿಸಿದರು.

ಸದನದಲ್ಲಿ ಶಾಸಕರು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶವಿದೆ. ಹೆಚ್ಚಿನ ಸಮಯಾವಕಾಶ ಇರುವುದರಿಂದ ಸದಸ್ಯರು ಇದನ್ನು ಸದುಪಯೋಗ ಮಾಡಿಕೊಂಡು, ರಚನಾತ್ಮಕ ಚರ್ಚೆಯಲ್ಲಿ ಪಾಲ್ಗೊಳ್ಳಲು ಇದು ಉತ್ತಮ ಅವಕಾಶ ಎಂದರು.

ಮಾ.2 ಮತ್ತು 3ರಂದು ಸದನದಲ್ಲಿ ಸಂಪೂರ್ಣವಾಗಿ ಸಂವಿಧಾನ ಕುರಿತು ಚರ್ಚೆಯಾಗಲಿದೆ. ಆಗ ಯಾವುದೇ ರಾಜಕೀಯ ಚರ್ಚೆಗೆ ಅವಕಾಶ ಇರುವುದಿಲ್ಲ. ಸಂವಿಧಾನದ ಆಶಯ, ಮೂಲ ಉದ್ದೇಶ ಮಾತ್ರ ಈ ವೇದಿಕೆಯಲ್ಲಿ ಚರ್ಚೆಯಾಗಲಿದೆ ಎಂದು ಮಾಹಿತಿ ನೀಡಿದರು.

ಈ ಬಾರಿಯೂ ಮೀಡಿಯಾ ಕ್ಯಾಮರಾಗಳಿಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ. ಲೋಕಸಭಾ ಮತ್ತು ರಾಜ್ಯಸಭಾ ಮಾದರಿ ಅನುಸರಿಸುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಈ ಹಿಂದಿನ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ದೃಶ್ಯ ಮಾಧ್ಯಮದ ಕ್ಯಾಮರಾಗಳಿಗೆ ವಿಧಾನಸಭಾ ಸಭಾಂಗಣದ ಒಳಗೆ ಪ್ರವೇಶವಿಲ್ಲ. ಕಲಾಪದ ನೇರ ಪ್ರಸಾರಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಕ್ಯಾಮರಾಮನ್​ಗಳಿಗೆ ವಿಧಾನಸಭೆಯ ಪಾಸ್ ನೀಡದಂತೆ ಆದೇಶ ನೀಡಲಾಗಿದೆ.