ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಕ್ಷಣಗಣನೆ, ಸದನಕ್ಕೆ ಆಗಮಿಸುತ್ತಿರುವ ಮುಖಂಡರು -Vishwanews24
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ವಿಧಾನಸೌಧ ಎಲ್ಲಾ ದ್ವಾರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ನೇತೃತ್ವದಲ್ಲಿ ಭಾರಿ ಭದ್ರತೆ ಮಾಡಲಾಗಿದೆ. ಓರ್ವ ಹೆಚ್ಚುವರಿ ಪೊಲೀಸ್ ಆಯುಕ್ತ, 5 ಡಿಸಿಪಿಗಳು, 20 ಎಸಿಪಿಗಳು, 25 ಕೆಎಸ್ಆರ್ಪಿ ತುಕಡಿ, 21 ಸಿಎಆರ್ ತುಕಡಿ ನಿಯೋಜಿಸಲಾಗಿದೆ.
ಜತೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ವಾಟರ್ ಜೆಟ್ ಕೂಡ ನಿಯೋಜನೆ ಮಾಡಲಾಗಿದ್ದು, ವಿಧಾನಸೌಧ ಸುತ್ತ ಎರಡು ಕಿಮೀ ವ್ಯಾಪ್ತಿಯಲ್ಲಿ 114ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 5ಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಸಂಭ್ರಮಾಚರಣೆ, ಘೋಷಣೆ ಕೂಗುವುದು, ಪ್ರತಿಭಟನೆ, ಧರಣಿ, ಸತ್ಯಾಗ್ರಹ ನಡೆಸುವುದಕ್ಕೆ ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆಗೆ ಸೂಚಿಸಲಾಗಿದೆ.
ಮೈತ್ರಿ ಸರಕಾರ ಪತನದ ಭೀತಿ ಎದುರಿಸುತ್ತಿರುವ ಜೆಡಿಎಸ್ ಕೊನೇ ಅಸ್ತ್ರವಾಗಿ ಪಕ್ಷಾಂತರ ನಿಷೇಧ ಕಾಯ್ದೆ ಬಳಸಲು ಮುಂದಾಗಿದೆ. ತನ್ನ ಮೂವರು ಬಂಡಾಯ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದೆ. ಸದ್ಯಕ್ಕೆ ಆಡಳಿತ ಮೈತ್ರಿಕೂಟ ಮತ್ತು ಪ್ರತಿಪಕ್ಷಗಳೆರಡೂ ಸಂಖ್ಯಾಬಲ ತಮ್ಮ ಪರವಾಗಿಯೇ ಇದೆ ಎಂದು ಪ್ರತಿಪಾದಿಸುತ್ತಿವೆ.

