ರಂಜಾನ್ ಅವಧಿಯಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಸಮಯದಲ್ಲಿ ವಿನಾಯಿತಿಗೆ ಸಿಎಂ ಗೆ ಮನವಿ – vishwanews24
ರಂಜಾನ್ ವೇಳೆ ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಅವಧಿಯಲ್ಲಿ 1 ಗಂಟೆ ವಿನಾಯಿತಿಗೆ ಸಿಎಂಗೆ ಮನವಿ ಪತ್ರ
ಬೆಂಗಳೂರು: ರಂಜಾನ್ ಸಮಯದಲ್ಲಿ ಉಪವಾಸ ತೊರೆಯಲು ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಸಮಯದಲ್ಲಿ ಒಂದು ಗಂಟೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷರಾದ ಸೈಯದ್ ಅಹ್ಮದ್ ಮತ್ತು ನಜೀರ್ ಅಹ್ಮದ್ ಪತ್ರ ಬರೆದಿದ್ದಾರೆ. ಈಗಾಗಲೇ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ರಂಜಾನ್ ಉಪವಾಸ ತೊರೆಯಲು ಅನುಕೂಲವಾಗುವಂತೆ ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಅವಧಿಯಲ್ಲಿ ಅಲ್ಲಿನ ಸರ್ಕಾರಗಳು ವಿನಾಯಿತಿ ನೀಡುತ್ತಿವೆ. ಅದೇರೀತಿ ರಾಜ್ಯದಲ್ಲೂ ಕೂಡ ವಿನಾಯಿತಿ ನೀಡುವಂತೆ ಕೋರಿ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ.
ಪತ್ರದಲ್ಲಿ ಏನಿದೆ?
“ರಂಜಾನ್ ತಿಂಗಳು ಸಮೀಸುತ್ತಿದ್ದು, ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ ಸರ್ಕಾರವು ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಒಂದು ತಿಂಗಳು ಉಪವಾಸ ಇರುತ್ತಾರೆ. ಹೀಗಾಗಿ, ಅಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಜೆ 4 ಗಂಟೆಯ ನಂತರ ಅವರುಗಳ ನಿವಾಸಗಳಲ್ಲಿ ಉಪವಾಸ ಬಿಡಲು (ಇಪ್ತಿಯಾರ್) ಅನುಮತಿ ನೀಡಲಾಗಿದೆ.”
“ಆದುದರಿಂದ ದಯಮಾಡಿ ತಾವು ನಮ್ಮ ಕರ್ನಾಟಕದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಜೆ 4 ಗಂಟೆಯ ನಂತರ ಅವರುಗಳ ನಿವಾಸದಲ್ಲಿ ಉಪವಾಸ ಬಿಡಲು (ಇಪ್ತಿಯಾರ್) ಅನುಮತಿ ನೀಡುವಂತೆ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ” ಎಂದು ಪತ್ರದಲ್ಲಿ ಬರೆಯಲಾಗಿದೆ.
