ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರ ಅರ್ಜಿಯನ್ನು ಇಂದೇ ನಿರ್ಧರಿಸಿ :ಸ್ಪೀಕರ್ಗೆ ಸುಪ್ರೀಂ ಆದೇಶ -Vishwanews24
ಸ್ಪೀಕರ್ ವಾದಕ್ಕೆ ಹಿನ್ನಡೆಯಾಗಿದ್ದು, ದೋಸ್ತಿ ಸರ್ಕಾರಕ್ಕೆ ಇಂದೇ ಅಗ್ನಿ ಪರೀಕ್ಷೆ ಎದುರಾಗಲಿದೆ. ಅರ್ಜಿ ಸಲ್ಲಿಸಿದ 10 ಅತೃಪ್ತ ಶಾಸಕರಿಗೆ ಸ್ಪೀಕರ್ ಎದುರು ಸಂಜೆ 6 ಗಂಟೆಯೊಳಗೆ ಹಾಜರಾಗಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇತ್ತ ರಾಜೀನಾಮೆ ವಿಚಾರವಾಗಿ ಇಂದೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಹಾಗೂ ನಡೆದ ಬೆಳವಣಿಗೆಗಳ ಬಗ್ಗೆ ನಾಳೆ ಮಾಹಿತಿ ನೀಡಿ ಎಂದ ಸುಪ್ರೀಂ ಕೋರ್ಟ್ ಸ್ಪೀಕರ್ ರಮೇಶ್ ಕುಮಾರ್ಗೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ಈ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕರ್ನಾಟಕ ಡಿಸಿಪಿಗೆ ಸುಪ್ರೀಂ ನಿರ್ದೇಶಿಸಿದೆ.
ಅತೃಪ್ತ ಶಾಸಕರು ಬುಧವಾರ ಸ್ಪೀಕರ್ ವಿಳಂಬ ನೀತಿಯನ್ನು ವಿರೋಧಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅತೃಪ್ತರ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡು ವಿಚಾರಣೆ ನಡೆಸಿತು. ಮುಖ್ಯ ನ್ಯಾ.ರಂಜನ್ ಗೊಗಯ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಸಿತು. ಅತೃಪ್ತರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಕುಲ್ ರೋಹಟಿಗೆ ವಾದವನ್ನು ಆಲಿಸಿತು. ಇತ್ತ ಸಿಎಂ, ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಅವರಿಗೆ ನೋಟಿಸ್ ರವಾನಿಸಿದ್ದು, ನಿಮ್ಮ ವಾದವನ್ನು ಮಂಡಿಸಬಹುದು ಎಂದು ತಿಳಿಸಿದೆ.

