ರಾಜ್ಯದಲ್ಲಿ ಅ. 15ರವರೆಗೆ  ಭಾರೀ ಮಳೆ : ಕರಾವಳಿ ಸೇರಿದತೆ ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ -Vishawanews24

Featured, ರಾಜ್ಯ ನ್ಯೂಸ್

ರಾಜ್ಯದಲ್ಲಿ ಅ. 15ರವರೆಗೆ  ಭಾರೀ ಮಳೆ : ಕರಾವಳಿ ಸೇರಿದತೆ ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ -Vishawanews24

ಬೆಂಗಳೂರು :  ಬೆಂಗಳೂರು ಸೇರಿದಂತೆ ರಾಜ್ಯದ 18ಕ್ಕೂ ಅಧಿಕ ಜಿಲ್ಲೆಗಳಲ್ಲಿ ಅಕ್ಟೋಬರ್ 15ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಕರಾವಳಿ ಭಾಗದ ಅರಬ್ಬಿ ಸಮುದ್ರದದಲ್ಲಿ ಉಂಟಾದ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದೆ. ಈ ಮೇಲ್ಮೈ ಸುಳಿಗಾಳಿ ಶನಿವಾರದ ವೇಳೆಗೆ ದುರ್ಬಲಗೊಳ್ಳಲಿದೆ. ನಂತರ ಅಂಡಮಾನ್‌ ಉತ್ತರ ಭಾಗದಲ್ಲಿ ಸಣ್ಣ ಪ್ರಮಾಣದ ಟ್ರಫ್ ಸೃಷ್ಟಿಯಾಗಲಿದ್ದು, ಅದು ಆಂಧ್ರ ಪ್ರದೇಶದ ಕರಾವಳಿ ಮಾರ್ಗವಾಗಿ ಸಾಗಲಿದೆ. ಈ ಕಾರಣಗಳಿಂದ ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅ.12ರಂದು ಮತ್ತೆ ಚುರುಕಾಗಲಿರುವ ಮುಂಗಾರು ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ಚಾಮರಾಜ ನಗರ, ರಾಯಚೂರು, ಬೀದರ್‌, ಯಾದಗಿರಿ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಧಾರಕಾರವಾಗಿ ಸುರಿಯುವ ಸಾಧ್ಯತೆಯಿದೆ.

ಶಾಹೀನ್ ಚಂಡಮಾರುತ ಪ್ರಭಾವದಿಂದ ಬೆಂಗಳೂರಿನಲ್ಲಿ ಭಾನುವಾರ ಕೂಡ ಬೆಳಗ್ಗೆಯಿಂದ ರಾತ್ರಿವರೆಗೂ ಬಿಡದೆ ಮಳೆ ಸುರಿಯಿತು.ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು, ಕೆಲವೆಡೆ ತುಸು ಅಬ್ಬರ ಜೋರಾಗಿತ್ತು. ಮೆಜೆಸ್ಟಿಕ್‌, ಮಲ್ಲೇಶ್ವರ, ಹನುಮಂತನಗರ, ಬ್ಯಾಂಕ್‌ ಕಾಲೋನಿ, ಹೊಸಕೆರೆ ಹಳ್ಳಿ, ಮೈಸೂರು ರಸ್ತೆ, ರಾಜರಾಜೇಶ್ವರಿ ನಗರ, ವಿದ್ಯಾರಣ್ಯಪುರ, ರಿಚ್‌ಮಂಡ್‌ ವೃತ್ತ, ಶಾಂತಿ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ.

ಇನ್ನೂ ಐದು ದಿನ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ವರುಣನ ಅಬ್ಬರ ಇರಲಿದೆ ಎಂದು ಹೇಳಲಾಗಿದೆ.