ರಾಷ್ಟ್ರೀಯ ಕಾರ್ಗಿಲ್ ವಿಜಯ ದಿವಸಕ್ಕೆ 22 ವರ್ಷ : ಪಾಕಿಸ್ಥಾನದ ವಿರುದ್ಧ ವಿಜಯ ಪತಾಕೆ ಹಾರಿಸಿದ ಭಾರತ ಮಾತೆಯ ವೀರ ಪುತ್ರರ ಸ್ಮರಣೆ-Vishwanews24 

Featured, ರಾಷ್ಟ್ರ ನ್ಯೂಸ್

ರಾಷ್ಟ್ರೀಯ ಕಾರ್ಗಿಲ್ ವಿಜಯ ದಿವಸಕ್ಕೆ 22 ವರ್ಷ : ಪಾಕಿಸ್ಥಾನದ ವಿರುದ್ಧ ವಿಜಯ ಪತಾಕೆ ಹಾರಿಸಿದ ಭಾರತ ಮಾತೆಯ ವೀರ ಪುತ್ರರ  ಸ್ಮರಣೆ-Vishwanews24

“ಕಾರ್ಗಿಲ್‌ ವಿಜಯ ದಿವಸ’ ಅಥವಾ “ಆಪರೇಷನ್‌ ವಿಜಯ’ಕ್ಕೆ ಇಂದು 22 ವರ್ಷ ಪೂರ್ಣಗೊಂಡಿದ್ದು, ಪಾಕಿಸ್ಥಾನದ ವಿರುದ್ಧ ವಿಜಯ ಪತಾಕೆ ಹಾರಿಸಿದ ಭಾರತ ಮಾತೆಯ ವೀರ ಪುತ್ರರನ್ನು ಇಡೀ ದೇಶವೇ ಸ್ಮರಿಸುತ್ತಿದೆ. ಕಾರ್ಗಿಲ್‌ ಯುದ್ಧ ವೀರರ ನೆನಪಲ್ಲಿ ಪ್ರತೀ ವರ್ಷವೂ ದೇಶವಾಸಿಗಳು “ವಿಜಯ ದಿವಸ’ವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ, ಈ ವರ್ಷವೂ ದ್ರಾಸ್‌ನ ಕಾರ್ಗಿಲ್‌ ಯುದ್ಧ ಸ್ಮಾರಕದಲ್ಲಿ ವಿಜಯ ದಿವಸ ಆಚರಣೆಗೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ.

ಧ್ರುವ ಕಾರ್ಗಿಲ್‌ ರೈಡ್‌

ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್‌ 2 ದಿನಗಳ ಮೋಟಾರ್‌ ಸೈಕಲ್‌ ರ್ಯಾಲಿಗೆ ಗುರುವಾರವೇ ಚಾಲನೆ ನೀಡಿದ್ದು, ಯೋಧರು 25 ಬೈಕುಗಳಲ್ಲಿ ಉಧಾಂಪುರದಿಂದ ದ್ರಾಸ್‌ಗೆ ಸಂಚಾರ ಆರಂಭಿಸಿದ್ದಾರೆ. ಲೆ|ಜ| ವೈ.ಕೆ. ಜೋಶಿ ಅವರು “ಧ್ರುವ ಕಾರ್ಗಿಲ್‌ ರೈಡ್‌’ನ ನೇತೃತ್ವ ವಹಿಸಿದ್ದಾರೆ.

ರಾಷ್ಟ್ರಪತಿ ಭೇಟಿ

ಜಮ್ಮು-ಕಾಶ್ಮೀರ ಮತ್ತು ಲಡಾಖ್‌ಗೆ 4 ದಿನಗಳ ಭೇಟಿಗಾಗಿ ರಾಷ್ಟ್ರಪತಿ ಕೋವಿಂದ್‌ ರವಿವಾರ ಶ್ರೀನಗರಕ್ಕೆ ಬಂದಿಳಿದಿದ್ದಾರೆ. ಸೋಮವಾರ ಅವರು ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ.

ಕಾರ್ಗಿಲ್‌ ನೆನಪು

1999ರ ಜುಲೈ 26… ಕಾರ್ಗಿಲ್‌ ನಲ್ಲಿ ಪಾಕಿಸ್ಥಾನದ ಸೈನಿಕರನ್ನು ಹಿಮ್ಮೆಟ್ಟಿಸಿ ಭಾರತದ ಸಶಸ್ತ್ರ ಪಡೆಯ ವೀರ ಯೋಧರು ವಿಜಯ ಪತಾಕೆಯನ್ನು ಹಾರಿಸಿದ ದಿನ. 1998-99ರ ಚಳಿಗಾಲದ ಅವಧಿಯಲ್ಲಿ ಪಾಕಿಸ್ಥಾನವು ತನ್ನ ಸೇನಾಪಡೆ ಮತ್ತು ಉಗ್ರರನ್ನು ಗಡಿ ನಿಯಂತ್ರಣ ರೇಖೆಯ ಭಾರತದ ಬದಿಗೆ ಕಳುಹಿಸತೊಡಗಿತ್ತು. ಮೇ ತಿಂಗಳಲ್ಲಿ ಪಾಕ್‌ನ ಈ ಸಂಚು ಬೆಳಕಿಗೆ ಬರುತ್ತಿದ್ದಂತೆ, ಅಲರ್ಟ್‌ ಆದ ಭಾರತೀಯ ಸೇನೆ “ಆಪರೇಷನ್‌ ವಿಜಯ’ದ ರಣಕಹಳೆ ಮೊಳಗಿಸಿತು. ಪಾಕ್‌ ಅತಿಕ್ರಮಿಸಿರುವ ನಮ್ಮ ದೇಶದ ಭೂಭಾಗಗಳನ್ನು ಮರಳಿ ಪಡೆಯಲು 2 ಲಕ್ಷ ಯೋಧರನ್ನು ಜಮಾವಣೆಗೊಳಿಸಲಾಯಿತು. ಸತತ ಮೂರು ತಿಂಗಳ ಹೋರಾಟದ ಬಳಿಕ ಪಾಕ್‌ ಸೇನೆಯನ್ನು ಹಿಮ್ಮೆಟ್ಟಿಸಿ, ಭಾರತೀಯ ಭೂಭಾಗಗಳನ್ನು ಸೇನೆ ಮತ್ತೆ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.

ಅಂದು ಕಾರ್ಗಿಲ್‌ ನಲ್ಲಿ ಆಗಿದ್ದೇನು?

ಮೇ 4, 1999: ಕಾರ್ಗಿಲ್‌ ನಲ್ಲಿ ಪಾಕಿಸ್ಥಾನದ ಅತಿಕ್ರಮಣ

ಮೇ 5-15: ಸೇನಾ ಗಸ್ತು ಪಡೆ ರವಾನೆ. ಐವರು ಯೋಧರಿಗೆ ಚಿತ್ರ ಹಿಂಸೆ ನೀಡಿ ಕೊಲೆ

ಮೇ 26: ಭಾರ ತೀಯ ವಾಯುಪಡೆಯಿಂದ ವೈಮಾನಿಕ ದಾಳಿ

ಮೇ 27: ಮಿಗ್‌-27 ವಿಮಾನಕ್ಕೆ ಗುಂಡು. ಹಾರಿ ತಪ್ಪಿಸಿಕೊಂಡ ಪೈಲಟ್‌ ಅನ್ನು ವಶಕ್ಕೆ ಪಡೆದ ಪಾಕ್‌

ಜೂನ್‌ 10: ಭಾರತದ 6 ಯೋಧರ ತುಂಡರಿಸಿದ ದೇಹವನ್ನು ಹಸ್ತಾಂತರಿಸಿದ ಪಾಕ್‌. ಕೆರಳಿದ ಭಾರತೀಯ ಸೇನೆ.

ಜೂನ್‌ 12: ಉಭಯ ದೇಶಗಳ ವಿದೇಶಾಂಗ ಸಚಿವರಾದ ಜಸ್ವಂತ್‌ ಸಿಂಗ್‌ ಮತ್ತು ಸರ್ತಾಜ್‌ ಅಜೀಜ್‌ ನಡುವೆ ಸಭೆ ವಿಫ‌ಲ

ಜೂನ್‌ 15: ಕಾರ್ಗಿಲ್‌ ನಿಂದ ಸೇನೆ ಹಿಂಪಡೆಯುವಂತೆ ಪಾಕ್‌ ಪ್ರಧಾನಿಗೆ ಅಮೆರಿಕ ಆಗ್ರಹ

ಜೂನ್‌ 29: ಟೈಗರ್‌ ಹಿಲ್‌ ಸಮೀಪದ ಎರಡು ಮಹತ್ವದ ಶಿಬಿರಗಳನ್ನು ತನ್ನ ವಶಕ್ಕೆ ಪಡೆದ ಭಾರತೀಯ ಸೇನೆ

ಜುಲೈ 11: ಸೇನೆ ವಾಪಸಾತಿ ಪ್ರಕ್ರಿಯೆ ಆರಂಭಿಸಿದ ಪಾಕ್‌

ಜುಲೈ 26: ಯುದ್ಧ ಗೆದ್ದ ಭಾರತ; ಕಾರ್ಗಿಲ್‌ ನಿಂದ ಕಾಲ್ಕಿತ್ತ ಪಾಕ್‌ ಪಡೆ.