ವಾರದೊಳಗೆ 70 ಸಾವಿರ ಮಂದಿಗೆ ಉಚಿತ ಆಯುರ್ವೇದ ಔಷಧ ಪಡೆಯಲು ರಾಜ್ಯ ಸರ್ಕಾರ ಅನುಮತಿ ನೀಡುವ ವಿಶ್ವಾಸವಿದೆ :ಡಾ. ಗಿರಿಧರ ಕಜೆ
ಔಷಧದ ಲೈಸೆನ್ಸ್ ಅನ್ನು ಸರ್ಕಾರಕ್ಕೆ ನೀಡಿದ್ದೇನೆ. ಅದನ್ನು ಸರ್ಕಾರವು ಗೌಪ್ಯವಾಗಿ ತೆಗೆದಿಟ್ಟುಕೊಂಡಿದೆ ಎನ್ನುವ ವಿಚಾರ ಸುಳ್ಳು ..
ವಾರದೊಳಗೆ 70 ಸಾವಿರ ಮಂದಿಗೆ ಉಚಿತ ಆಯುರ್ವೇದ ಔಷಧ ಪಡೆಯಲು ರಾಜ್ಯ ಸರ್ಕಾರ ಅನುಮತಿ ನೀಡುವ ವಿಶ್ವಾಸವಿದೆ :
ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ
ಬೆಂಗಳೂರು: ಕೊರೊನಾ ಸೋಂಕಿತರೊಂದಿಗೆ ನೇರವಾಗಿ ಸಂಪರ್ಕಕ್ಕೆ ಬಂದಿರುವ 70 ಸಾವಿರ ಮಂದಿಗೆ ಉಚಿತ ಆಯುರ್ವೇದ ಔಷಧ ಪಡೆಯಲು ಇನ್ನು ಒಂದು ವಾರದಲ್ಲಿ ಸರ್ಕಾರವು ಅನುಮತಿ ನೀಡುವ ವಿಶ್ವಾಸವಿದೆ ಎಂಬುದಾಗಿ ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಹೇಳಿದ್ದಾರೆ.
ಫೇಸ್ಬುಕ್ ಲೈವ್ ಮೂಲಕ ಬಿಎಂಸಿಆರ್ಐ ನೀಡಿರುವ ನೋಟಿಸ್ನ ಗೊಂದಲ ಹಿನ್ನೆಲೆ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ನಾನು ಔಷಧದ ಲೈಸೆನ್ಸ್ ಅನ್ನು ಸರ್ಕಾರಕ್ಕೆ ನೀಡಿದ್ದೇನೆ. ಅದನ್ನು ಸರ್ಕಾರವು ಗೌಪ್ಯವಾಗಿ ತೆಗೆದಿಟ್ಟುಕೊಂಡಿದೆ ಎನ್ನುವ ವಿಚಾರ ಸುಳ್ಳು. ಈ ಹಂತದಲ್ಲಿ ಔಷಧಿ ಯಶಸ್ಸು ಸಾಧಿಸಲು ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳ ಸಹಕಾರ ಕಾರಣ. ಸ್ವಾತಂತ್ರ್ಯದ ಬಳಿಕ ಅಲೋಪಥಿ ಔಷಧ ಕ್ರಮಗಳನ್ನು ಉಪಯೋಗ ಮಾಡುತ್ತಿರುವ ಕಾರಣ ಆಯುರ್ವೆದದ ಬಗ್ಗೆ ಕೆಲವೊಂದು ತಪ್ಪು ತಿಳುವಳಿಕೆಗಳು ಇವೆ. ಹಾಗಾಗಿ ಪ್ರಕ್ರಿಯೆ ಸಮಯ ತಗೆದುಕೊಳ್ಳುತ್ತದೆ. ಇನ್ನು ಒಂದು ವಾರದಲ್ಲಿ ಸರ್ಕಾರವು ಉಚಿತ ಔಷಧವನ್ನು ಪಡೆದುಕೊಂಡು ಪ್ರಾಥಮಿಕ ಸೋಂಕಿತರಿಗೆ ರೋಗ ನಿರೋಧಕ ಔಷಧವೆಂದು ನೀಡುವ ಭರವಸೆ ಹೊಂದಿದ್ದೇನೆ ಎಂದು ತಿಳಿಸಿದರು.
ಈ ಔಷಧದ ತಯಾರಿಕೆಯನ್ನು ಸರ್ಕಾರ ಪ್ರಾರಂಭ ಮಾಡಿದ ಬಳಿಕ ಸ್ಥಗಿತಗೊಳಿಸುತ್ತೇನೆ. ಇನ್ನು ಪ್ರಾಥಮಿಕ ಸೋಂಕಿತರಿಗೆ, ಪೊಲೀಸ್, ಪತ್ರಕರ್ತರಿಗೆ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಹಾಗೂ ಕೋ ಮಾರ್ಬಿಡ್ ಸ್ಥಿತಿಯವರಿಗೆ ಈ ಔಷಧವು ಮೊದಲು ದೊರಕಲಿ ಎನ್ನುವ ಉದ್ದೇಶವಾಗಿದೆ.
ಮೊದಲು ಸಂಶೋಧರಿಗೆ ಗೌರವ ನೀಡಬೇಕು. ಯಾವುದಕ್ಕೆ ಸ್ಪಷ್ಟನೆ ತಿಳಿಯಬೇಕೆಂದರೆ ನಾನೇ ಹೇಳುತ್ತೇನೆ. ಆದರೆ, ಈ ರೀತಿಯಾಗಿ ಅದನ್ನು ನೋಟಿಸ್ ರೂಪದಲ್ಲಿ ಹೊರಡಿಸಿ ನನಗೆ 17 ದಿನವಾದರೂ ತಲುಪಿಸದೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವಂತ ಅವಶ್ಯಕತೆ ಇರಲಿಲ್ಲ. ಕೊರೊನಾದ ಈ ಸಂದರ್ಭ ಯಾವ ಔಷಧದಿಂದ ಪರಿಹಾರ ಸಿಗುತ್ತದೆ ಎನ್ನುವ ವಿಚಾರವನ್ನು ಸ್ವಾಗತಿಸುವಂತ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. 10 ಮಂದಿ ಗುಣಮುಖರಾಗಿದ್ದಾರೆ ಎನ್ನುವ ವಿಚಾರ ಸಣ್ಣದಲ್ಲ.
ಭಯಭೀತರಾಗುವುದಕ್ಕಿಂತ ಎಚ್ಚರ ವಹಿಸುವುದು ಅತೀ ಅಗತ್ಯ. ರೋಗ ಬರುವ ಮೊದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಆಯುರ್ವೇದದಿಂದ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆ ಯುವ ಶಕ್ತಿಯಿದೆ. ಅಲೋಪಥಿಗೊಂದು, ಆಯುರ್ವೇಧ ಕ್ಕೊಂದು ಮಾನದಂಡ ಬೇಡ. ಪ್ಲಾಸ್ಮಾ ಥೆರಪಿ ಒಬ್ಬರಿಗೆ ಮಾಡಿದ ತಕ್ಷಣ ಎಲ್ಲ ಕಡೆ ಧನಾತ್ಮಕ ಚರ್ಚೆ ನಡೆಯಿತು. ಆಯುರ್ವೇದಕ್ಕೆ ಮಾತ್ರ ಪ್ರಶ್ನೆಗಳು ಬರುವುದು ಸರಿಯಲ್ಲ ಎಂದರು.
ಔಷಧ ತಯಾರಿಕೆಯ ಸೂತ್ರ ಸರ್ಕಾರಕ್ಕೆ ಒಪ್ಪಿಸುವೆ ಸರ್ಕಾರ ಉಚಿತವಾಗಿ ಔಷಧ ವಿತರಣೆ ಕಾರ್ಯ ಆರಂಭಿಸಿದ ನಂತರ ಔಷಧ ತಯಾರಿಕೆಯ ಸೂತ್ರ ಹಾಗೂ ಪರವಾನಗಿಯನ್ನು ಸರ್ಕಾರಕ್ಕೆ ಒಪ್ಪಿಸಲಿದ್ದೇನೆ. ಸರ್ಕಾರವೇ ತಯಾರಿಸುವ ಅಥವಾ ಖಾಸಗಿ ಸಂಸ್ಥೆಗಳಿಗೆ ಉತ್ಪಾದನೆಗೆ ನೀಡುವವ ರೆಗೆ ಮಾತ್ರ ಔಷಧವನ್ನು ತಯಾರಿಸಿ ಮಾರಾಟ ಮಾಡುತ್ತೇನೆ. ಈಗಾಗಲೆ ನಾಲ್ಕು ಎಂಎನ್ಸಿಗಳು ಕೋಟ್ಯಂತರ ರೂ.ಗೆ ಔಷಧದ ಹಕ್ಕನ್ನು ಕೊಳ್ಳಲು ಬಂದಿದ್ದವು. ಆದರೆ, ಮೊದಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಾರಾಟ ಮಾಡಿಲ್ಲ ಎಂದು ಡಾ.ಗಿರಿಧರ ಕಜೆ ಹೇಳಿದರು.
