ಶಬರಿಮಲೆಗೆ ಹೋಗುವವರು ಕಾಣಿಕೆಯನ್ನು ಹಾಕದಿರಿ ; ನಾವು ಹಾಕಿದ ಕಾಣಿಕೆ ಹಣವನ್ನು ಅಲ್ಲಿನ ಸರ್ಕಾರ ಶಬರಿಮಲೆ ದೇವಸ್ಥಾನಕ್ಕೆ ಬಳಸುವುದಿಲ್ಲ : ಶಾಸಕ ಭರತ್ ಶೆಟ್ಟಿ
ಮಂಗಳೂರು: ಶಬರಿಮಲೆ ದೇವಸ್ಥಾನಕ್ಕೆ ಹೋಗುವವರು ಒಂದು ರೂಪಾಯಿ ಕಾಣಿಕೆಯನ್ನು ಹಾಕದಿರಿ. ಯಾಕೆಂದರೆ ನಾವು ಹಾಕಿದ ಆ ಕಾಣಿಕೆ ಹಣವನ್ನು ಯಾವುದೇ ಕಾರಣಕ್ಕೂ ಅಲ್ಲಿನ ಸರ್ಕಾರ ಶಬರಿಮಲೆ ದೇವಸ್ಥಾನಕ್ಕೆ ಬಳಸುವುದಿಲ್ಲ ಎಂದು ಶಬರಿಮಲೆ ಸಂರಕ್ಷಣಾ ಕ್ರಿಯಾ ಸಮಿತಿಯಿಂದ ನಡೆದ ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಮೇಲಿನ ದೌರ್ಜನ್ಯದ ವಿರುದ್ಧ ಇಂದು ಬೆಳಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ವೈ.ಭರತ್ ಶೆಟ್ಟಿ ಹೇಳಿದರು.
ಕಮ್ಯುನಿಸ್ಟರಿಗೆ ಅನ್ಯ ಧರ್ಮಿಯರ ನಂಬಿಕೆಗಳಿಗೆ ಘಾಸಿಗೊಳಿಸುವ ಧೈರ್ಯ ಇಲ್ಲ. ಹಿಂದೂಗಳು ಮಾತ್ರ ಟಾರ್ಗೆಟ್ ಆಗುತ್ತಿದ್ದಾರೆ. ಇಡೀ ಕೇರಳದ ಹಿಂದೂಗಳು ಇದರ ವಿರುದ್ಧ ನಿಂತಿದ್ದಾರೆ. ನಾವುಗಳು ಎಲ್ಲಾ ರಾಜ್ಯಗಳಿಂದ ಲಕ್ಷಗಟ್ಟಲೆ ಜನ ನಮ್ಮ ಕಾರ್ಯಕರ್ತರು ಶಬರಿಮಲೆಗೆ ಹೋಗುತ್ತೇವೆ. ಅವರು ಎಷ್ಟು ಪೊಲೀಸರನ್ನು ಹಾಕುತ್ತಾರೆ ನೋಡೋಣ. ಈಗ 15 ರಿಂದ 20 ಸಾವಿರ ಪೊಲೀಸರನ್ನು ಹಾಕಿದ್ದಾರೆ. ನಾವೂ ಲಕ್ಷಾಂತರ ಜನ ಅಲ್ಲಿಗೆ ಮಾಲೆ ಹಾಕಿಕೊಂಡು ಹೋಗುತ್ತೇವೆ. ಇವರ 15 ಸಾವಿರ ಪೊಲೀಸರಿಗೆ ನಮ್ಮನ್ನು ಏನು ಮಾಡಲು ಸಾಧ್ಯ ಅನ್ನೋದನ್ನು ನೋಡುತ್ತೇವೆ ಎಂದು ಬಿಜೆಪಿ ಶಾಸಕ ಸವಾಲು ಹಾಕಿದರು.
ಹಿಂದೆ ಶಬರಿಮಲೆಯಲ್ಲಿ ಪೊಲೀಸ್ ಸೆಕ್ಯುರಿಟಿಗಳಿಗೆ ಅಲ್ಲೊಂದು ನಿಯಮ ಇತ್ತು. ಚರ್ಮದ ಶೂ ಹಾಗೂ ಬೆಲ್ಟ್ ಹಾಕುವಂತಿಲ್ಲ, ಔಟ್ ಶರ್ಟ್ ಮಾಡಲಾಗುತಿತ್ತು. ಕಪ್ಪು ಬಟ್ಟೆಯನ್ನು ಕತ್ತಿನ ಸುತ್ತ ಧರಿಸಲಾಗುತ್ತಿತ್ತು. ಆದರೆ ಈಗ ಬಂದ ಐಪಿಎಸ್ ಅಧಿಕಾರಿಗೆ ಈ ಬಗ್ಗೆ ಜ್ಞಾನವಿಲ್ಲ. ಶಬರಿಮಲೆಯ ಈಗಿನ ಐಪಿಎಸ್ ಅಧಿಕಾರಿ ಪೊಲೀಸರಿಗೆ ಶೂ ಹಾಕಬೇಕು, ಬೆಲ್ಟ್ ಹಾಕಬೇಕು, ಇನ್ ಶರ್ಟ್ ಮಾಡಬೇಕು ಕಪ್ಪು ಬಟ್ಟೆಗಳನ್ನು ತೊಡಬಾರದು ಎಂದು ಆಜ್ಞೆ ಮಾಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಶಬರಿಮಲೆಗೆ ತೆರಳಿದ ಭಕ್ತರನ್ನು ಅದೇ ಬೂಟ್ ಗಾಲಿನಿಂದ ತುಳಿಯಲಾಗುತ್ತಿದೆ. ಅದರಲ್ಲಿಯೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್ ಅವರ ಇರುಮುಡಿಯನ್ನು ನೆಲಕ್ಕೆ ಕೆಡವಿ, ಅವರನ್ನು ದರದರನೆ ಎಳೆದುಕೊಂಡು ಹೋಗುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದರೆ ಹಿಂದೂ ಭಾವನೆಗಳಿಗೆ, ಹಿಂದೂ ಪೂಜಾ ವಿಧಾನಗಳಿಗೆ ಅಲ್ಲಿ ಬೆಲೆಯೇ ಇಲ್ಲವೆಂದು ಶಾಸಕ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗಣೇಶ್ ಪೊದುವಾಲ್, ರಾಧಾಕೃಷ್ಣ ಅಡ್ಯಂತಾಯ ಸೇರಿದಂತೆ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಶರಣ್ ಪಂಪ್ವೆಲ್, ಬ್ರಿಜೇಶ್ ಚೌಟ, ಜಗದೀಶ್ ಶೇಣವ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
