ಶಬರಿಮಲೆ ಪ್ರವೇಶಿಸುವುದು ನಿಶ್ಚಿತ : ತೃಪ್ತಿ ದೇಸಾಯಿ
ತಿರುವನಂತಪುರಂ/ದೆಹಲಿ: ನವೆಂಬರ್ 17ರಂದು ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಿಸುವುದು ಖಚಿತ ಎಂದು ಭೂಮಾತಾ ಬ್ರಿಗೇಡ್ ಸಂಸ್ಥಾಪಕಿ ತೃಪ್ತಿ ದೇಸಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಹಿಳೆಯರ ಪ್ರವೇಶಾವಕಾಶ ಪ್ರಶ್ನಿಸಿ ನೀಡಿರುವ ತನ್ನದೇ ತೀರ್ಪನ್ನು ಜನವರಿಯಲ್ಲಿ ಮರುಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿರುವ ನಡುವೆಯೇ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಮಂಡಲ ಮಕರಜ್ಯೋತಿ ಯಾತ್ರೆ ಆರಂಭದಂದು (ನ.17 )ದೇಗುಲ ಪ್ರವೇಶಿಸುವುದಾಗಿ ತಿಳಿಸಿದ್ದಾರೆ.
ಅಯ್ಯಪ್ಪ ದರ್ಶನ ಪಡೆಯದೆ ಮಹಾರಾಷ್ಟ್ರಕ್ಕೆ ವಾಪಸಾಗುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ. 10ರಿಂದ 50 ವರ್ಷ ವಯೋಮಾನದ ಇತರ ಆರು ಮಹಿಳೆಯರನ್ನೂ ದೇಗುಲಕ್ಕೆ ಕರೆಯದೊಯ್ಯುವುದಾಗಿ ಹೇಳಿದ್ದಾರೆ.
ದೇವಸ್ಥಾನದ ಸಂಪ್ರದಾಯ ಮುರಿಯಲು ಮಹಿಳೆಯರು ಮುಂದಾದರೆ, ಅವರ ಮುಂದೆ ಮಲಗಿಯಾದರೂ ಆ ಪ್ರಯತ್ನವನ್ನು ತಡೆಯುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಹೇಳಿದ್ದಾರೆ.
ರಾಹುಲ್ ಈಶ್ವರ್ ಎಲ್ಲ ವಯಸ್ಸಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ನ ಈ ಹಿಂದಿನ ತೀರ್ಪಿಗೆ ತಡೆ ನೀಡಲು ಸಾಧ್ಯವಿಲ್ಲ. ಮೇಲ್ಮನವಿ ಪರಿಶೀಲನೆ ಅರ್ಜಿಯನ್ನು ಮುಂದಿನ ಜನವರಿ ಇಪ್ಪತ್ತೆರಡರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಕೋರ್ಟ್ ತಿಳಿಸಿದೆ.
ಭದ್ರತೆಗೆ ಮನವಿ: ಈ ಮಧ್ಯೆ, ದೇಸಾಯಿ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು ದೇಗುಲ ಭೇಟಿ ವೇಳೆ ಭದ್ರತೆ ಒದಗಿಸುವಂತೆ ಕೋರಿದ್ದಾರೆ.


