ಶಬರಿಮಲೆ ವಿವಾದ : ಪ್ರತಿಯೊಬ್ಬರಿಗೂ ಪ್ರಾರ್ಥಿಸುವ ಹಕ್ಕಿದೆ ಆದರೆ ಅಪವಿತ್ರಗೊಳಿಸುವ ಹಕ್ಕಿಲ್ಲ :ಸ್ಮೃತಿ ಇರಾನಿ
ಮುಂಬಯಿ : ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋವರ್ಗದ ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಪ್ರವೇಶಾವಕಾಶ ನೀಡಿರುವುದಕ್ಕೆ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಕೇಂದ್ರ ಸಚಿವ ಸ್ಮ್ರತಿ ಇರಾನಿ ಅವರು “ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಹಕ್ಕೆಂದರೆ ದೇವಸ್ಥಾನವನ್ನು ಅಪವಿತ್ರಗೊಳಿಸುವ ಹಕ್ಕೆಂದು ತಿಳಿಯುವಂತಿಲ್ಲ” ಎಂದು ಹೇಳಿದ್ದಾರೆ.
”ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮಾತನಾಡಲು ನಾನು ಯಾರೂ ಅಲ್ಲ; ಮೇಲಾಗಿ ನಾನು ಕೇಂದ್ರ ಸರಕಾರದಲ್ಲಿ ಸಚಿವೆಯಾಗಿರುವುದರಿಂದ ಕೂಡ ನಾನು ಮಾತನಾಡುವಂತಿಲ್ಲ. ಆದರೆ ರಕ್ತದ ಕಲೆಗಳಿರುವ ನ್ಯಾಪ್ಕಿನ್ ಜತೆ ಸ್ನೇಹಿತರ ಮನೆಗೆ ಹೋದರೆ ಹೇಗೆ ಎಂಬ ಸಾಮಾನ್ಯ ಪರಿಜ್ಞಾನ ಇರಬೇಕು. ನ್ಯಾಪ್ಕಿನ್ ಜತೆ ಸ್ನೇಹಿತರ ಮನೆಗೆ ಹೋಗಲು ನಮ್ಮಿಂದ ಸಾಧ್ಯವಿಲ್ಲ ಎಂದ ಮೇಲೆ ದೇವಸ್ಥಾನಕ್ಕೆ ಹೋಗುವುದು ಸರಿಯೇ? ನಮಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ಇದೆ. ಆದರೆ ಅದನ್ನು ಅಪವಿತ್ರಗೊಳಿಸುವ ಹಕ್ಕು ಇಲ್ಲ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ..”
”…ಹಾಗೆಯೇ ದೇವರ ಮನೆಯನ್ನು ಪ್ರವೇಶಿಸುವ ಹಕ್ಕಿನಲ್ಲಿ ಅದನ್ನು ಅಪವಿತ್ರ ಗೊಳಿಸುವ ಹಕ್ಕು ಇರುವುದಿಲ್ಲ. ಈ ವ್ಯತ್ಯಾಸವನ್ನು ನಾವು ಅರಿತುಕೊಳ್ಳಬೇಕು; ನನಗೆ ದೇವಸ್ಥಾನದಲ್ಲಿ ಪೂಜಿಸುವ ಹಕ್ಕಿದೆ; ಆದರೆ ಅದನ್ನು ಅಪವಿತ್ರಗೊಳಿಸುವ ಹಕ್ಕು ಇರುವುದಿಲ್ಲ. ಈ ವ್ಯತ್ಯಾಸವನ್ನು ನಾವು ಅರಿತುಕೊಂಡು ದೇವಸ್ಥಾನದ ಪಾವಿತ್ರ್ಯವನ್ನು ಗೌರವಿಸಬೇಕು” ಎಂದು ಸ್ಮ್ರತಿ ಇರಾನಿ ಹೇಳಿದರು.
”ನಾನೋರ್ವ ಹಿಂದು; ಆದರೆ ಮದುವೆಯಾದದ್ದು ಝೊರಾಸ್ಟ್ರಿಯನ್ ನನ್ನು. ಹಾಗಾಗಿ ನನಗೆ ಅಗ್ನಿ ದೇವಳಕ್ಕೆ ನನಗೆ ಪ್ರವೇಶ ಇರಲಿಲ್ಲ; ನಾನು ಕುಟುಂಬ ಸಹಿತ ಅಲ್ಲಿಗೆ ಹೋಗಿದ್ದಾಗ ಮಕ್ಕಳನ್ನು ಗಂಡನ ಕೈಗೆ ಒಪ್ಪಿಸಿ, ನಾನು ಮಾತ್ರವೇ ದೇವಳದ ಹೊರಗೆ ಕಾರಿನಲ್ಲಿ ಕುಳಿತಿರಬೇಕಾದ ಪರಿಸ್ಥಿತಿಯನ್ನು ಎದುರಿಸಿದ್ದೇನೆ ಎಂದು ಸ್ಮ್ರತಿ ಇರಾನಿ ಹೇಳಿದರು.

