ಶಬರಿಮಲೆ ಸನ್ನಿಧಿಗೆ ಹೆಚ್ಚು ಭಕ್ತರಿಗೆ ಪ್ರವೇಶ: ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರಿಂಗೆ ಮೊರೆ -Vishwanews24
ಶಬರಿಮಲೆ ಸನ್ನಿಧಿಗೆ ಹೆಚ್ಚು ಭಕ್ತರಿಗೆ ಪ್ರವೇಶ: ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರಿಂಗೆ ಮೊರೆ -Vishwanews24
ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ತೆರಳುವ ಭಕ್ತರ ಸಂಖ್ಯೆಯನ್ನು 5000ದವರೆಗೆ ಹೆಚ್ಚಿಸಿದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರವು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಭಕ್ತರ ಸಂಖ್ಯೆ ಹೆಚ್ಚಿಸಿರುವುದು ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹೇರಲಿದೆ ಎಂದು ಸರ್ಕಾರ ಹೇಳಿದೆ.
ಡಿಸೆಂಬರ್ 26ರಿಂದ ಜನವರಿ 14ರತನಕ ನಡೆಯಲಿರುವ ವಾರ್ಷಿಕ ಮಂಡಲ-ಮಕರವಿಳಕ್ಕು ಕಾರ್ಯಕ್ರಮದ ನಿರ್ವಹಣೆಗಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಶಬರಿಮಲೆಯಲ್ಲಿ ಯಾತ್ರಿಕರ ಸಂಖ್ಯೆಯನ್ನು ಪ್ರತಿದಿನ 2000 ಹಾಗೂ ವಾರಾಂತ್ಯದಲ್ಲಿ 3000ಕ್ಕೆ ಹೆಚ್ಚಿಸಿ ನಿಗದಿ ಮಾಡಿತ್ತು ಎಂದು ಕೇರಳ ಸರ್ಕಾರವು ಅರ್ಜಿಯಲ್ಲಿ ಹೇಳಿದೆ.
ಆದರೆ, ಡಿಸೆಂಬರ್ 20ರಿಂದ ಶಬರಿಮಲೆ ಸನ್ನಿಧಿಗೆ ತೆರಳುವ ಭಕ್ತರ ಸಂಖ್ಯೆಯನ್ನು 5000ದವರೆಗೆ ಹೆಚ್ಚಿಸಿ ಕೇರಳ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಪೊಲೀಸ್ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳ ಸಂಖ್ಯೆ, ಶಬರಿಮಲೆಯಲ್ಲಿರುವ ಕೋವಿಡ್ ಪೀಡಿತರ ಸಂಖ್ಯೆಯನ್ನೂ ಪರಿಗಣಿಸದೆ ಕೇರಳ ಹೈಕೋರ್ಟ್ ಈ ಆದೇಶ ಹೊರಡಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ವರ್ಚ್ಯುವಲ್ ಕ್ಯೂ ಮೂಲಕ ತೀರ್ಥಯಾತ್ರಿಕರು ದೇವಸ್ಥಾನದೊಳಗೆ ಬಿಡಲಾಗುವುದು. ಈ ವ್ಯವಸ್ಥೆಯನ್ನು ಪೊಲೀಸರು ನೋಡಿಕೊಳ್ಳಲಿದ್ದಾರೆ. ಭಕ್ತರು ದೇವಸ್ಥಾನದೊಳಗೆ ಪ್ರವೇಶಿಸುವುದಕ್ಕೂ ಮುನ್ನ ಅವರನ್ನು ಕೋವಿಡ್ ಪರೀಕ್ಷೆಗೂ ಒಳಪಡಿಸಲಾಗುವುದು. ಹಾಗಾಗಿ ಭಕ್ತರ ಸಂಖ್ಯೆ ಹೆಚ್ಚಿಸಿದ್ದರೆ ಪೊಲೀಸ್ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳ ಮೇಲೆ ತುಂಬಾ ಒತ್ತಡ ಬೀಳುತ್ತದೆ ಎಂದು ಕೇರಳ ಸರ್ಕಾರ ಸುಪ್ರೀಂಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
