ಶೀಘ್ರದಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ : ಶ್ರೀರಾಮುಲು -Vishwanews24
ಬೆಂಗಳೂರು : ಶೀಘ್ರದಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಒಂದಿಷ್ಟು ಆಸ್ಪತ್ರೆಗಳ ಪಟ್ಟಿ ಮಾಡಿಕೊಂಡಿದ್ದು, ಆ ಆಸ್ಪತ್ರೆಗಳಿಗೆ ಭೇಟಿ ನೀಡಿ ರಾತ್ರಿ ವಾಸ್ತವ್ಯ ಹೂಡುತ್ತೇನೆ. ಅಲ್ಲಿನ ಸ್ಥಿತಿಗತಿ, ಸಿಬ್ಬಂದಿಗಳ ಕೊರತೆ ಹಾಗೂ ರೋಗಿಗಳ ಅಹವಾಲು ಸ್ವೀಕರಿಸುವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸಿದರೆ ಸೇವೆಯಿಂದ ವಜಾಗೊಳಿಸಲು ಹಿಂದೇಟು ಹಾಕುವುದಿಲ್ಲ. ಸರ್ಕಾರಿ ವೈದ್ಯರ ಖಾಸಗಿ ಕ್ಲಿನಿಕ್ ಸಮಸ್ಯೆಯಿಂದ ಬಡವರಿಗೆ ಸಮಸ್ಯೆಯಾಗುತ್ತಿದೆ. ಬಡವರಿಗೆ ಸಮಸ್ಯೆ ಉಂಟು ಮಾಡುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀರಾಮುಲು ಎಚ್ಚರಿಕೆ ನೀಡಿದರು.
