ಸಿದ್ದರಾಮಯ್ಯ ಸರ್ಕಾರ ಹೊಡೆದೋಡಿಸಿ ರಾಮರಾಜ್ಯ ನಿರ್ಮಿಸಿ: ಯೋಗಿ ಆದಿತ್ಯನಾಥ್‌

Featured, ಜಿಲ್ಲೆ

ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನೋಡಿದರೆ ಕಾಂಗ್ರೆಸ್ ಮುಕ್ತವಾಗಲಿದೆ ಎಂಬ ವಿಶ್ವಾಸ ಮೂಡಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು.

ಶಿರಸಿಯ ವಿಕಾಸಾಶ್ರಮ ಮೈದಾನದಲ್ಲಿ  ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಹೊಡೆದೋಡಿಸಿ ರಾಮರಾಜ್ಯ ಸ್ಥಾಪಿಸಬೇಕು. ಕಾಂಗ್ರೆಸ್‌ನ ಒಡೆದಾಳುವ ನೀತಿ ಅಪಾಯಕಾರಿ. ಸಿದ್ದರಾಮಯ್ಯ ಪದೇ ಪದೇ ಜಾತಿ ಒಡೆಯೋ ಮಾತನಾಡುತ್ತಾರೆ. ಯುಪಿಯಲ್ಲೂ ಹಿಂದೆ ಸಿದ್ದರಾಮಯ್ಯ ರೀತಿಯ ಸರ್ಕಾರವಿತ್ತು. ಯುಪಿಯಲ್ಲಿ ಬಿಜೆಪಿ ಆಡಳಿತ ಬಂದಮೇಲೆ ಅಭಿವೃದ್ಧಿಯಾಗಿದೆ. ಈಗ ಕಾಂಗ್ರೆಸ್ ಪಕ್ಷ ರಾಜ್ಯವನ್ನು ಎಟಿಎಂ ಮಾಡಿಕೊಂಡಿದೆ ಎಂದು ದೂರಿದರು.

ಉತ್ತರ ಕರ್ನಾಟಕ ಭಾಗ ಕೃಷಿ ಆಧಾರಿತ ಪ್ರದೇಶ. ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶ ಹಾಗೂ ಕರ್ನಾಟಕದ ಸಂಬಂಧ ರಾಮ-ಹನುಮಾನ್‌ ಸಂಬಂಧ ಇದ್ದ ಹಾಗೆ. ವಿಶ್ವಾಸಕ್ಕೆ ಮತ್ತೊಂದು ಹೆಸರು ಕರ್ನಾಟಕ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದು ಅತಿ‌ಮುಖ್ಯ. ಜಿಹಾದಿಗಳ‌ ಮೂಲಕ 24 ಜನ ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ. ಉತ್ತರ ಪ್ರದೇಶದಲ್ಲಿ ಜಿಹಾದಿಗಳು ತಲೆ‌ ಎತ್ತದಂತೆ ಮಾಡಿದ್ದೇವೆ. ಅದರೆ, ಕರ್ನಾಟಕದಲ್ಲಿ ಅವರನ್ನು ಬೆಂಬಲಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ರಾಜ್ಯದ ಪ್ರಗತಿ ಕುಂಠಿತ

ದೇಶದಲ್ಲಿ ಮೋದಿ ಸರ್ಕಾರ ಬಂದಮೇಲೆ ಅಭಿವೃದ್ಧಿಯಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರದ ಯೋಜನೆಗಳು ಜಾರಿಯಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಬೆಂಗಳೂರು, ಮಂಗಳೂರು ಸೇರಿ ರಾಜ್ಯದೆಲ್ಲೆಡೆ ಒಂದೇ ಸ್ಥಿತಿ ಇದೆ. ಯಡಿಯೂರಪ್ಪ ಅವರನ್ನು ಕರ್ನಾಟಕದ ಸಿಎಂ ಮಾಡಿದರೆ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತೇವೆ. ಈ ಹಿಂದೆ ಕರ್ನಾಟಕ ಉದ್ಯೋಗ ಸೃಷ್ಟಿಯ ಕೇಂದ್ರವಾಗಿತ್ತು. ಆದರೆ, ಈಗ ರಾಜ್ಯದ ಪ್ರಗತಿ ಕುಂಠಿತಗೊಂಡಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಕನ್ನಡದಲ್ಲಿ ಭಾಷಣ ಆರಂಭಿಸಿದ ಯೋಗಿ, ಶಿರಸಿ ಜನತೆಗೆ ವಂದಿಸಿದರು. ಸ್ಥಳೀಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ವಿ.ಎಸ್.ಪಾಟೀಲ್, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವು ನಾಯಕರು ಭಾಗಿಯಾಗಿದ್ದಾರೆ.