ಸಿದ್ದು ಚಡ್ಡಿ ಸುಡುವ ಅಭಿಯಾನ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಚಡ್ಡಿ‌ ಪೂರೈಕೆ: ಕುಯಿಲಾಡಿ ಸುರೇಶ್ ನಾಯಕ್ -Vishwanews24

Featured, ಉಡುಪಿ

ಸಿದ್ದು ಚಡ್ಡಿ ಸುಡುವ ಅಭಿಯಾನ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಚಡ್ಡಿ‌ ಪೂರೈಕೆ: ಕುಯಿಲಾಡಿ ಸುರೇಶ್ ನಾಯಕ್

ಕಳೆದ 97 ವರ್ಷಗಳಿಂದ‌ ದೇಶದಾದ್ಯಂತ ಅವಿರತ ಸಾರ್ಥಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದೇಶಭಕ್ತ ಸೇವಾ‌ ಸಂಘಟನೆ ಆರ್.ಎಸ್.ಎಸ್. ವಿರುದ್ಧ ಮತಿಭ್ರಮಣೆಯಾದಂತೆ ವರ್ತಿಸಿ ಅತ್ಯಂತ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಾ ತನ್ನ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸುತ್ತಿರುವ ಮಾಜಿ ಸಿ.ಎಂ. ಸಿದ್ಧರಾಮಯ್ಯ ಚಡ್ಡಿ ಸುಡುವ ಅಭಿಯಾನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಸಡ್ಡು ಹೊಡೆದಿದೆ.

ಆರ್.ಎಸ್.ಎಸ್ ವಿರುದ್ಧ ದ್ವೇಷವನ್ನು ಪ್ರದರ್ಶಿಸುವ ಭರದಲ್ಲಿ ಮನುಷ್ಯನ‌ ಮಾನ ಮುಚ್ಚುವ ಸಾಧನವಾಗಿರುವ ಚಡ್ಡಿಯನ್ನು ಸುಡುವ ಮೂಲಕ ಕಾಂಗ್ರೆಸ್‌ ಪಕ್ಷ ತನ್ನ‌‌ ಮಾನ ಮರ್ಯಾದೆಯನ್ನು‌ ತಾನೇ ಹರಾಜು ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಸಿದ್ಧರಾಮಯ್ಯ ಮಹತ್ವಾಕಾಂಕ್ಷಿ ಚಡ್ಡಿ ಸುಡುವ ಅಭಿಯಾನವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಚಡ್ಡಿಗಳನ್ನು ಪೂರೈಸಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು ತಮ್ಮ ಬಳಕೆಯಾಗದೆ ಉಳಿದಿರುವ ಚಡ್ಡಿಗಳನ್ನು‌ ಜೋಡಿಸಿ ನಾಳೆ ಸಂಜೆಯೊಳಗೆ ಬಿಜೆಪಿ ಜಿಲ್ಲಾ ಕಚೇರಿಗೆ ತಲುಪಿಸುವ ಮೂಲಕ ಚಡ್ಡಿಗಳನ್ನು ಸಿದ್ಧರಾಮಯ್ಯಗೆ ತಲುಪುವಂತೆ‌ ಬೆಂಗಳೂರು ಕಾಂಗ್ರೆಸ್‌ ಕಚೇರಿಗೆ ಕಳುಹಿಸಿಕೊಡಲು ಸಹಕರಿಸುವಂತೆ ಅವರು ಕರೆ ನೀಡಿದ್ದಾರೆ.

ಮುಳುಗುತ್ತಿರುವ ಹಡಗು ಕಾಂಗ್ರೆಸ್ಸನ್ನು ಸಾಲು ಸಾಲಾಗಿ‌ ತೊರೆಯುತ್ತಿರುವ ಪ್ರಭಾವಿ ಕಾಂಗ್ರೆಸ್ ನಾಯಕರು ಒಂದೆಡೆಯಾದರೆ‌ ನಾಯಕತ್ವದ ಕೊರತೆ, ಮುಸುಕಿನ ಗುದ್ದಾಟದ ಬೇಗುದಿಯಿಂದ ಸಿದ್ಧರಾಮಯ್ಯ ಸ್ಥಿತಿ ಕೈಲಾಗದವನು ಮೈ ಪರಚಿಕೊಂಡಂತೆ ಎಂಬಂತಾಗಿದೆ.

ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಸಹಿತ ಯಾವುದೇ ಕಾಂಗ್ರೆಸ್ ನಾಯಕರು ಮೌಲ್ಯಾಧಾರಿತ ರಾಜಕಾರಣವನ್ನು ಮರೆತು ದ್ವೇಷ ಕಾರುವ ದಿಕ್ಕಿನಲ್ಲಿ ಕೀಳು ಮಟ್ಟದ ಕೊಳಕು ರಾಜಕೀಯ ನೀತಿ ಅನುಸರಿಸಿದರೆ ಅದೇ ದಾಟಿಯಲ್ಲಿ ಪ್ರತಿಕ್ರಯಿಸಲು ಬಿಜೆಪಿ ಕಾರ್ಯಕರ್ತರು ಸದಾ ಸಿದ್ಧರಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply