ಸ್ವಚ್ಛ ಭಾರತ್‌ : ದೇಶದಲ್ಲಿಯೇ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ

Featured, ಉಡುಪಿ

ಉಡುಪಿಕ್ರೀಡಾಕೂಟ ಆಯೋಜಿಸಲು ಸರ್ಕಾರದಿಂದ ಇದುವರೆಗೂ ಆದೇಶ ಬಾರದಿರುವುದರಿಂದ ತಾಲ್ಲೂಕು, ಜಿಲ್ಲೆ ಹಾಗೂ ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟ ನಡೆಸಲು ಅಧಿಕಾರಿಗಳು ಮುಂದಾಗಿಲ್ಲ. ಪರಿಣಾಮ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದರು.

ಸ್ವಚ್ಛ ಆಡಳಿತ ಹಾಗೂ ಜನಪ್ರತಿನಿಧಿಗಳ ಬೆಂಬಲದಿಂದ ಜಿಲ್ಲಾ ಪಂಚಾಯ್ತಿ ಉತ್ತಮ ಸಾಧನೆ ಮಾಡಿದೆ. ಸ್ವಚ್ಛ ಭಾರತ್‌ ಅಭಿಯಾನದಡಿ ಜಿಲ್ಲೆಯಲ್ಲಿ ತೆಗೆದುಕೊಂಡ ಸ್ವಚ್ಛತಾ ಕ್ರಮಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಸ್ವಚ್ಛ ದರ್ಪಣ್‌ ಶ್ರೇಯಾಂಕದಲ್ಲಿ ಉಡುಪಿಗೆ ದೇಶದಲ್ಲಿಯೇ ಮೊದಲ ಸ್ಥಾನ ನೀಡಲಾಗಿದೆ ಎಂದರು.

ಕ್ವಾಲಿಟಿ ಆಫ್‌ ಕೌನ್ಸಿಲ್ ಇಂಡಿಯಾ ಸಮೀಕ್ಷೆಯಲ್ಲಿ ಸ್ವಚ್ಛ ಜಿಲ್ಲೆಯ ಪಟ್ಟಿಯಲ್ಲಿ ಉಡುಪಿ 7ನೇ ಸ್ಥಾನ ಪಡೆದಿದೆ. ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಸ್ಟೇಟ್‌ ಆಫ್‌ ಸ್ಟೇಟ್‌ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೆ.ಶೀಲಾ ಶೆಟ್ಟಿ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ₹ 18.86 ಕೋಟಿ ಮೊತ್ತದ 2,434 ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ₹ 22.19 ಕೋಟಿ ಅನುದಾನದಲ್ಲಿ 1,049 ಕಾಮಗಾರಿ ಹಮ್ಮಿಕೊಂಡಿದ್ದು, ಶೇ 83ರಷ್ಟು ಸಾಧನೆ ಮಾಡಲಾಗಿದೆ. ₹ 4 ಕೋಟಿ ಪಂಚಾಯಿತಿ ಅಭಿವೃದ್ಧಿ ಅನುದಾನದಲ್ಲಿ 278 ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಉತ್ತಮ ಸಾಧನೆ ಮಾಡುತ್ತಿದೆ. ಕಳೆದ ಬಾರಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶೇ 88.30 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.‌‌

ಆರ್‌.ಟಿ.ಇ ಅಡಿಯಲ್ಲಿ 93 ಅನುದಾನಿತ ಶಾಲೆಯಲ್ಲಿ 1,351 ಸೀಟುಗಳು ಕಾಯ್ದಿರಿಸಿದ್ದು, 1003 ಮಕ್ಕಳು ದಾಖಲಾಗಿದ್ದಾರೆ. ಕ್ಷೀರ ಭಾಗ್ಯ ಹಾಗೂ ಅಕ್ಷರ ದಾಸೋಹ, ಶೂ ಹಾಗೂ ಸಾಕ್ಸ್‌ ವಿತರಣೆ, ಪುಸಕ್ತ, ಬೈಸಿಕಲ್‌ ವಿತರಣೆ ಯೋಜನೆಯನ್ನು ಜಿಲ್ಲೆಯಲ್ಲಿ ಸರ್ಮಪಕವಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಪೋಲಿಯೊ, ಬಿಸಿಜಿ, ದಡಾರ ಇತರೆ ಚುಚ್ಚುಮದ್ದು ಕಾರ್ಯಕ್ರಮಗಳಲ್ಲಿ ಶೇ 100 ಪ್ರಗತಿ ಸಾಧಿಸಲಾಗಿದೆ. ಹೆಪಟೈಟೀಸ್‌ ‘ಬಿ’ ಮತ್ತು ಟಿ.ಟಿ (ಗರ್ಭಿಣಿ)ಯಲ್ಲಿ ಶೇ 94 ಸಾಧನೆ ಮಾಡಲಾಗಿದೆ. ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದಲ್ಲಿ ಗರ್ಭಿಣಿಯರ ನೋಂದಣಿ, ಹೆರಿಗೆ ನಿರ್ವಹಣೆ, ಕಬ್ಬಿಣ ಸತ್ವ ಮಾತ್ರೆ ವಿತರಣೆಯಲ್ಲಿ ಶೇ 100 ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.