ಹಣಕಾಸು ಹಾಗೂ ಆರೋಗ್ಯ ಸಮಸ್ಯೆ : ದಂಪತಿ ಆತ್ಮಹತ್ಯೆ ; ಮಕ್ಕಳು ಶವವಾಗಿ ಪತ್ತೆ – vishwanews24

Featured, ರಾಷ್ಟ್ರ ನ್ಯೂಸ್

ಹಣಕಾಸು ಹಾಗೂ ಆರೋಗ್ಯ ಸಮಸ್ಯೆ : ದಂಪತಿ ಆತ್ಮಹತ್ಯೆ ; ಮಕ್ಕಳು ಶವವಾಗಿ ಪತ್ತೆ

ಹೈದರಾಬಾದ್: ಹಣಕಾಸು ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರು ಮಕ್ಕಳು ಕೂಡ ಶವವಾಗಿ ಪತ್ತೆಯಾದ ಘಟನೆ ಹೈದರಾಬಾದ್‌ನ ಹಬ್ಸಿಗುಡದಲ್ಲಿನಡೆದಿದೆ.

ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಕ್ಕಳನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗಂಡ-ಹೆಂಡತಿಯ ಮೃತದೇಹ ಬೇರೆಬೇರೆ ಕೋಣೆಗಳಲ್ಲಿ ಪತ್ತೆಯಾಗಿದ್ದು, ಅಪ್ರಾಪ್ತ ಮಕ್ಕಳು ಬೆಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಚಿನ್ನ ಕಳ್ಳಸಾಗಣೆ ಪ್ರಕರಣ : ಡಿಜಿಪಿ ರಾಮಚಂದ್ರ ರಾವ್‌ಗೆ ಸಂಕಷ್ಟ ;  ತನಿಖೆಗೆ ಗೃಹ ಇಲಾಖೆ ಆದೇಶ – vishwanews24

ಹಬ್ಸಿಗುಡ ಪ್ರದೇಶದ ರವೀಂದ್ರನಗರ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಬಳಿಕ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಂಪತಿ ಮೊದಲು ತಮ್ಮ ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ನೇಣು ಹಾಕಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್ ರಾಜೇಂದರ್ ತಿಳಿಸಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಆತ್ಮಹತ್ಯೆಗೂ ಮುನ್ನ ಪತಿ ಬರೆದಿದ್ದ ಡೆತ್ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಜೀವನವನ್ನು ಕೊನೆಗೊಳಿಸುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನನ್ನ ವೃತ್ತಿಜೀವನದಲ್ಲಿ ಕಷ್ಟಪಡುತ್ತಿದ್ದೇನೆ ಮತ್ತು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದೇನೆ. ನಾನು ಮಧುಮೇಹ, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮೂತ್ರಪಿಂಡದ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದೇನೆ ಎಂದು ತೆಲುಗಿನಲ್ಲಿ ಪತಿ ಡೆತ್ ನೋಟ್ ಬರೆದಿದ್ದಾರೆ.

ಉಡುಪಿ: ನಮ್ಮ ಕ್ಲಿನಿಕ್ ಮೂಲಕ ಗುಣಮಟ್ಟದ ಆರೋಗ್ಯ ಸೇವೆಗೆ ಆದ್ಯತೆ : ಯಶ್ ಪಾಲ್ ಸುವರ್ಣ – vishwanews24

ಮೆಹಬೂಬ್‌ನಗರ ಜಿಲ್ಲೆಯ ಕಲ್ವಕುರ್ತಿ ಬ್ಲಾಕ್‌ನ ಮುಕುರಲ್ಲಾ ಗ್ರಾಮದವರಾದ ದಂಪತಿ ತಮ್ಮ ಮಕ್ಕಳೊಂದಿಗೆ ಒಂದು ವರ್ಷದ ಹಿಂದೆ ಹಬ್ಸಿಗುಡಕ್ಕೆ ಬಂದು ನೆಲೆಸಿದ್ದರು. ಖಾಸಗಿ ಕಾಲೇಜುವೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತಿದ್ದ ಪತಿ ಕಳೆದ ಆರು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು. ದೀರ್ಘಕಾಲದ ನಿರುದ್ಯೋಗದಿಂದಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರಬಹುದು. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ರಾಜೇಂದರ್ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ

Leave a Reply