ಹಿಜಾಬ್ ತೀರ್ಪು : ಮುಸ್ಲಿಂ ಮುಖಂಡರು 6 ವಿದ್ಯಾರ್ಥಿಗಳಿಗೆ ಆಗಲೇ ಬುದ್ದಿ ಹೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಸಚಿವ ಕೆ.ಎಸ್.ಈಶ್ವರಪ್ಪ
ಹಿಜಾಬ್ ಕುರಿತಾಗಿ ಸುಪ್ರೀಂ ವಿಸ್ತೃತ ಪೀಠದ ತೀರ್ಪಿಗೆ ಎಲ್ಲರೂ ಬದ್ಧರಾಗಬೇಕು..
ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವೇ ಅಲ್ಲ..
ಕುರಾನ್ ಧರ್ಮ ಗ್ರಂಥದಲ್ಲೂ ಉಲ್ಲೇಖವಿಲ್ಲದ ಹಿಜಾಬ್ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದರು..
ಮುಸ್ಲಿಂ ಮುಖಂಡರು 6 ವಿದ್ಯಾರ್ಥಿಗಳಿಗೆ ಆಗಲೇ ಬುದ್ದಿ ಹೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ
ವಿಜಯಪುರ: ಹಿಜಾಬ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ನೀಡಿರುವ ಎರಡು ರೀತಿಯ ನಿರ್ಧಾರದಿಂದ ಪ್ರಕರಣ ವಿಸ್ತ್ರತ ಪೀಠಕ್ಕೆ ಹೋಗಿದೆ. ಸುಪ್ರೀಂ ಕೋರ್ಟ್ ವಿಸ್ತೃತ ಪೀಠ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವೇ ಅಲ್ಲ. ಕುರಾನ್ ಧರ್ಮ ಗ್ರಂಥದಲ್ಲೂ ಉಲ್ಲೇಖವಿಲ್ಲದ ಹಿಜಾಬ್ ಹೆಸರಿನಲ್ಲಿ ಕೆಲವು ದೇಶ ದ್ರೋಹಿಗಳು ಆರು ಹೆಣ್ಣುಮಕ್ಕಳ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡಿದರು. ಮುಸ್ಲಿಂ ಮುಖಂಡರು ಆಗಲೇ ಬುದ್ದಿ ಹೇಳಿದ್ದರೆ ಪರಿಸ್ಥಿತಿ ಇಲ್ಲಿಗೆ ಬರುತ್ತಿರಲಿಲ್ಲ ಎಂದರು.
ಹೈಕೋರ್ಟ್ ತೀರ್ಪು ನೀಡಿದಾಗಲೇ ಮುಸ್ಲಿಂ ಮುಖಂಡರು ಆ ಆರು ಹೆಣ್ಣು ಮಕ್ಕಳಿಗೆ ಬೈದು ಬುದ್ದಿ ಹೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸದ್ಯ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ವಿಭಿನ್ನ ಅಭಿಪ್ರಾಯ ನೀಡಿದ್ದು ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಸಮಾನತೆಗೆ, ಸಂವಿಧಾನಕ್ಕೆ ಆದ್ಯತೆ ಕೊಡಬೇಕು. ಐದು ಅಥವಾ ಏಳು ಜನರ ನ್ಯಾಯಾಧೀಶರ ವಿಸ್ತೃತ ಪೀಠ ನೀಡುವ ತೀರ್ಪು ಏನಾಗಲಿದೆ ಎಂಬುದು ನೋಡಬೇಕು, ವಿಸ್ತೃತ ಪೀಠ ನೀಡುವ ತೀರ್ಪಿಗೆ ಎಲ್ಲರೂ ಬದ್ಧವಾಗಿರಬೇಕು ಎಂದರು.

