ಹಿರಿಯಡಕ ದೇವಸ್ಥಾನದ ಬ್ರಹ್ಮಕಲಶಕ್ಕೂ ತಟ್ಟಿದ ಚುನಾವಣಾ ನೀತಿ ಸಂಹಿತೆ : ಘರಂ ಆದ ಗ್ರಾಮಸ್ಥರು

ಉಡುಪಿ : ಚುನಾವಣಾ ನೀತಿ ಸಂಹಿತೆ ಬಿಸಿ ಕೇವಲ ರಾಜಕೀಯ ಪಕ್ಷಕ್ಕೆ ಹಾಗೂ ರಾಜಕಾರಣಿಗಳಿಗೆ ಮಾತ್ರವಲ್ಲ ಜಿಲ್ಲೆಯ ವಿವಿಧ ಧಾರ್ಮಿಕ ಆಚರಣೆಗಳಿಗೂ ತಟ್ಟಿದೆ. ಇತ್ತೀಚೆಗೆ ಯಕ್ಷಗಾನ, ನಾಗಮಂಡಲಗಳಿಗೆ ಚುನಾವಣಾಧಿಕಾರಿಗಳು ನೀತಿ ಸಂಹಿತೆ ಹಿನ್ನಲೆಯಲ್ಲಿ ಅಡ್ಡಿಪಡಿಸಿರುವ ಬೆನ್ನಲ್ಲೇ ಇದೀಗ ಹಿರಿಯಡ್ಕದ ವೀರಭದ್ರ ದೇವಾಲಯದ ಬ್ರಹ್ಮಕಲಶೋತ್ಸವ ಬ್ಯಾನರ್ ಗಳನ್ನು ಚುನಾವಣಾಧಿಕಾರಿಗಳು ಬಲವಂತವಾಗಿ ತೆಗೆದುಹಾಕಿದ್ದಾರೆ. ಐನೂರಕ್ಕೂ ಅಧಿಕ ಬ್ಯಾನರ್ ಬಂಟಿಂಗ್ಸ್ ತೆರವು ಮಾಡಿದ ಚುನಾವಣಾಧಿಕಾರಿಗಳು ರಾಜಕೀಯ ರಹಿತ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವುದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎ.16 ರಿಂದ 25 ವರೆಗೆ ನಡೆಯ ಲಿರುವ ಬ್ರಹ್ಮ ಕಲಶೋತ್ಸವಕ್ಕೆ ಸಾಕಷ್ಟು ಪ್ರಚಾರದ ಅಗತ್ಯವಿದೆ.
ಕರಾವಳಿ ಮಲೆನಾಡು ಭಾಗದ ಪ್ರಸಿದ್ದ ದೇವಾಲಯವಾದ ಮಹತೋಭಾರ ವೀರಭದ್ರ ದೇವಾಲಯ 28 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರ ಕಂಡಿದ್ದು ಈ ಸಮಯದಲ್ಲೇ ಬ್ಯಾನರ್ ತೆರವು ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಭಕ್ತ ಸಮೂಹದಲ್ಲಿ ಉದ್ಘವವಾಗಿದೆ.

