ಹಿರಿಯ ನಟ ಅನಂತ್‌ ನಾಗ್‌ಗೆ 75ನೇ ಜನ್ಮದಿನ; ಮಂಗಳೂರಿನಲ್ಲಿ ನಡೆದ ಅದ್ಧೂರಿ ‘ಅನಂತ ಅಭಿನಂದನೆ -Vishwanews24

Featured, ದಕ್ಷಿಣ ಕನ್ನಡ

ಹಿರಿಯ ನಟ ಅನಂತ್‌ ನಾಗ್‌ಗೆ 75ನೇ ಜನ್ಮದಿನ; ಮಂಗಳೂರಿನಲ್ಲಿ ನಡೆದ ಅದ್ಧೂರಿ ‘ಅನಂತ ಅಭಿನಂದನೆ’

ನಾನು ಕರಾವಳಿಯಲ್ಲಿ ಬೆಳೆದವ ಎಂಬುದು ಹೆಮ್ಮೆ , ಮಂಗಳಾದೇವಿ ಕೃಪೆಯಿಂದ ಇಲ್ಲಿ ಹುಟ್ಟುಹಬ್ಬ ನೆರವೇರಿದೆ : ಅನಂತ ನಾಗ್‌

ಹಿರಿಯ ನಟ ಅನಂತ ನಾಗ್‌ ಅವರ 75ನೇ ಜನ್ಮದಿನ, ವೃತ್ತಿಜೀವನದ 50ರ ಸಂಭ್ರಮ ಮತ್ತು ಸನ್ಮಾನದ ‘ಅನಂತ ಅಭಿನಂದನೆ’ ಕಾರ್ಯಕ್ರಮ ನಗರದ ಟಿ ವಿ ರಮಣ ಪೈ ಸಭಾಂಗಣದಲ್ಲಿ ಭಾನುವಾರ (ಸೆ.3) ನಡೆಯಿತು. ನಟ ಅನಂತ ನಾಗ್‌ ಮತ್ತು ಗಾಯತ್ರಿ ದಂಪತಿಯನ್ನು ಅತಿಥಿಗಳು ಮಲ್ಲಿಗೆ, ಜಾಜಿ ಹೂವಿನ ಮಾಲೆ, ಬೆಳ್ಳಿಯ ವೀಳ್ಯದ ಎಲೆ, ತುಳುನಾಡಿನ ಪರಂಪರೆಯ ಕಂಬಳದ ಬೆತ್ತ, ಪುಷ್ಪವೃಷ್ಟಿ ಸಹಿತ ವಿಶೇಷವಾಗಿ ಸನ್ಮಾನಿಸಿ, ಗೌರವಿಸಿದರು.

ವಿಧಾನಸಭೆ ಸ್ಪೀಕರ್‌ ಯು ಟಿ ಖಾದರ್‌ ಅಧ್ಯಕ್ಷತೆ ವಹಿಸಿ, ‘ಈ ಸನ್ಮಾನವು ಸಂಸ್ಕೃತಿ ವಿನಿಮಯ ಮೂಲಕ ಎಲ್ಲರಿಗೂ ಪ್ರೇರಣೆ ಕೊಡುವ ಕಾರ್ಯಕ್ರಮ. ಅನಂತ ನಾಗ್‌ ಕಾಲ ನಿರ್ಣಾಯಕರು. ಅವರ ಕಾಲದಲ್ಲಿ ನಾವಿದ್ದೇವೆ ಎಂಬುದು ಹಿರಿಮೆ. ಅನಂತ ನಾಗ್‌ ಕರ್ನಾಟಕದ ಅಮಿತಾಭ್‌ ಬಚ್ಚನ್‌’ ಎಂದು ಹೊಗಳಿದರು.

ಸನ್ಮಾನ ಸ್ವೀಕರಿಸಿದ ಅನಂತ್‌ನಾಗ್‌ ಬಾಲ್ಯದ ಊರಿನಲ್ಲಿ 75ನೇ ವರ್ಷದ ಸಂಭ್ರಮಾಚರಣೆ ಮಾಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.  ಕರಾವಳಿಯ ಅಭಿಮಾನದ ಈ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ ಎಂದರು.

‘ಅನಂತನಾಗ್‌ ಅವರ ಚಿತ್ರರಂಗದ 50 ವರ್ಷ ಅಂದರೆ ಮಹಾನ್‌ ಸಾಧನೆ. ಅವರಿಗೆ ಪದ್ಮಭೂಷಣ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಂದರೆ, ಪ್ರಶಸ್ತಿಗೆ ಮೌಲ್ಯ ಬರುತ್ತದೆ. ಅವರು ನೂರ್ಕಾಲ ಬಾಳಲಿ’ ಎಂದು ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಹಾರೈಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ‘ದೇಶ ಕಂಡ ಅದ್ಭುತ ನಾಯಕ ನಟ ಅನಂತ ನಾಗ್‌. ಮಲಯಾಳಂ ಸಿನಿಮಾದ ಸರಳ ನಟನೆ ಅನಂತ ನಾಗ್‌ ಅವರಲ್ಲಿ ಕಂಡಿದ್ದೇನೆ. ಅವರೊಬ್ಬ ಅಪ್ಪಟ ರಾಷ್ಟ್ರಭಕ್ತ’ ಎಂದು ಅಭಿನಂದಿಸಿದರು.

ಭಾರತವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಒಂಬತ್ತು ವರ್ಷಗಳಿಂದ ಪ್ರಧಾನಿಯಾಗಿರುವ ಮೋದಿ ಅಲ್ಲ : ಎಂ ಬಿ ಪಾಟೀಲ್‌ – Vishwanews24

ಶಾಸಕ ಡಿ ವೇದವ್ಯಾಸ ಕಾಮತ್‌ ಮಾತನಾಡಿ, ‘ಇಡೀ ಕುಟುಂಬ ನೋಡುವ ಸಿನಿಮಾ ನೀಡುತ್ತಿದ್ದ ಅನಂತ ನಾಗ್‌ ಅವರ ಕೊಡುಗೆ ಸಮಾಜಕ್ಕೆ ದೊಡ್ಡದು. ಮನಸ್ಸಿನ ದುಗುಡಕ್ಕೆ ಸಿನಿಮಾ ಸಾಂತ್ವನ ನೀಡುತ್ತದೆ. ಹಾಗಾಗಿ ಕಲಾವಿದರ ಶ್ರಮ ಸಾರ್ಥಕ. ಕಲಾವಿದರಾಗಿ ಅನಂತನಾಗ್‌ ಹಲವರನ್ನು ಬೆಳೆಸಿದ್ದಾರೆ. ಅವರ ಮಾರ್ಗದರ್ಶನ ಕಿರಿಯರಿಗೆ ಸಿಗಲಿದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಮಾತನಾಡಿ, ‘ನಾಡಿನ ಜನರ ಪ್ರೀತಿ ತೋರಿಸುವ ಕಾರ್ಯಕ್ರಮವಿದು. ಸುಂದರ ಕ್ಷಣದ ಗೊಂಚಲಿನ ಅನುಭವ ಇಲ್ಲಿಆಗಿದೆ. ಅನಂತನಾಗ್‌ ನಮ್ಮವರಾಗಿ ಸಂಬಂಧ ಬೆಳೆದವರು’ ಎಂದರು. ಹಿರಿಯ ನಟ ಡಾ ದೇವದಾಸ ಕಾಪಿಕಾಡ್‌ ಮಾತನಾಡಿ, ‘ಕನ್ನಡದ ಸ್ಫುರದ್ರೂಪಿ ನೈಜ ನಟನೆಯ ನಟ ಅನಂತ ನಾಗ್‌ ನಮಗೆ ಆದರ್ಶ. ಅವರ ಸಿನಿಮಾದ ಎಲ್ಲ ಹಾಡುಗಳೂ ಸೂಪರ್‌ ಹಿಟ್‌ ಆಗಿವೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ’ ಎಂದರು.

ಕಾರ್ಯಕ್ರಮದಲ್ಲಿ ಅನಂತ್‌ನಾಗ್‌ ಪತ್ನಿ ಗಾಯಿತ್ರಿ, ಪುತ್ರಿ ಅದಿತಿ, ಅಳಿಯ ವಿವೇಕ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಕಾಸರಗೋಡು ಚಿನ್ನ, ಸದಾಶಿವ ಶೆಣೈ, ಗಿರಿಧರ ಶೆಟ್ಟಿ, ನರೇಶ್ ಶೆಣೈ, ನಟ ರಿಷಬ್‌ ಶೆಟ್ಟಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು. 

ಮಂಗಳಾದೇವಿ ಕೃಪೆ ಕಾರಣ
‘ನಾನು ಕರಾವಳಿಯಲ್ಲಿ ಬೆಳೆದವ ಎಂಬುದು ಹೆಮ್ಮೆ. ನೂರಾರು ಬಾರಿ ಇಲ್ಲಿಂದ ಓಡಾಡಿದ್ದೇನೆ. ಮಂಗಳಾದೇವಿ ಕೃಪೆಯಿಂದ ಇಂದು ಇಲ್ಲಿ ಹುಟ್ಟುಹಬ್ಬ ನೆರವೇರಿದೆ. ಎಲ್ಲ ಮಹಾನ್‌ ವ್ಯಕ್ತಿಗಳ ನಟನೆ ಮಾಡಿದ್ದೇನೆ. ಗುರುಗಳ ಆಶಿರ್ವಾದದಿಂದ ಇಲ್ಲಿ ಸನ್ಮಾನ ಪಡೆದಿದ್ದು, ಧನ್ಯತಾ ಭಾವನೆ ಮೂಡಿದೆ. ನನ್ನ ಹಾಡಿಗೆ ಪುಟಾಣಿಗಳ ನೃತ್ಯ ಅದ್ಭುತ ಕಲ್ಪನೆ..’ ಎನ್ನುತ್ತಾ ‘ಭಾಗ್ಯದ ಲಕ್ಷ್ಮೀ ಬಾರಮ್ಮಾ..’ ಹಾಡನ್ನು ಹಾಡಿ ಹಿರಿಯ ನಟ ಅನಂತ್‌ ನಾಗ್‌ ಎಲ್ಲರನ್ನೂ ರಂಜಿಸಿದರು.

ಸನಾತನ ಧರ್ಮ ಶಾಂತಿಯ ಸಂದೇಶ ಸಾರುತ್ತದೆ ಹೊರತು , ಡೆಂಗ್ಯೂ, ಮಲೇರಿಯಾದಂತೆ ರೋಗ ಹರಡುವ ಸೊಳ್ಳೆಯಲ್ಲ : ಉದಯನಿಧಿ ಹೇಳಿಕೆಗೆ ಪ್ರಮೋದ್‌ ಮುತಾಲಿಕ್‌ ತಿರುಗೇಟು  – Vishwanews24

ಕೆನರಾ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ವಾಸುದೇವ ಕಾಮತ್‌, ತುಳು ಸಾಂಸ್ಕೃತಿಕ ಪ್ರತಿಷ್ಠಾನದ ಗಿರಿಧರ ಶೆಟ್ಟಿ, ರಂಗ ಸಂಗಾತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಸ್ವಾಗತಿಸಿದರು. ಶಶಿರಾಜ್‌ ಕಾವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತನಾಗ್‌ ಅಭಿನಂದನಾ ಸಮಿತಿ ಸಂಚಾಲಕ ಗೋಪಿನಾಥ್‌ ಭಟ್‌ ವಂದಿಸಿದರು.

Leave a Reply