ಹೆಜಮಾಡಿ ಟೋಲ್ – ಉಡುಪಿ ಜಿಲ್ಲೆಯ ಎಲ್ಲಾ ವಾಹನಗಳಿಗೆ ಉಚಿತ ಪ್ರವೇಶಕ್ಕೆ ಪ್ರಸ್ತಾಪ : ಸಚಿವ ವಿ. ಸುನೀಲ್ ಕುಮಾರ್ – Vishwanews24
ಉಡುಪಿ ಜಿಲ್ಲೆಯ ಎಲ್ಲಾ ವಾಹನಗಳಿಗೆ ಉಚಿತ ಪ್ರವೇಶ ಅದಕ್ಕಾಗಿ ಪ್ರತ್ಯೇಕ ಮಾರ್ಗಕ್ಕೆ ಪ್ರಸ್ತಾಪ
ಸಮಸ್ಯೆ ಪರಿಹಾರ ಆಗುವವರೆಗೆ ಹೆಜಮಾಡಿಯಲ್ಲಿ ಹೊಸ ಸುಂಕವನ್ನು ಸಂಗ್ರಹ ಮಾಡಬಾರದು ಎಂದು ನಿರ್ಧಾರ
ಉಡುಪಿ: ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸಲು ನೀಡಿರುವ ಆದೇಶದ ಬಗ್ಗೆ ಇಂದು ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಉಡುಪಿ ತಾಲೂಕು ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿಗೆ ವರ್ಗಾಯಿಸಿದೂದರ ಸಾದಕ ಭಾದಕಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರು ಆನ್ಲೈನ್ ಮುಲಕ ಭಾಗವಹಿಸಿದರು. ಹಾಗೂ ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ಯಕ್ಷಗಾನ ಕಾಲಮಿತಿ ರಾತ್ರಿ 12 ಗಂಟೆವರೆಗೆ ವಿಸ್ತರಣೆ: ದ.ಕ. ಜಿಲ್ಲಾಧಿಕಾರಿ ರವಿಕುಮಾರ್ – Vishwanews24
ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅವರು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದಾಗಿ ಅವೈಜ್ಞಾನಿಕವಾದ ವ್ಯವಸ್ಥೆ ಜಾರಿ ಆಗಿದೆ. ಈ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದೇವೆ ಎಂದರು.
ಹಾಗೂ ಹೆಜಮಾಡಿಯಲ್ಲಿ ಹೆಚ್ಚುವರಿ ಸುಂಕ ಪಡೆಯಬಾರದು ಮತ್ತು ಕೆ.20 ನೋಂದಣಿಯ ಉಡುಪಿ ಜಿಲ್ಲೆಯ ಎಲ್ಲಾ ವಾಹನಗಳಿಗೆ ಉಚಿತ ಪ್ರವೇಶದ ರಿಯಾಯ್ತಿ ನೀಡಬೇಕು. ಅದಕ್ಕಾಗಿ ಜಿಲ್ಲೆಯ ವಾಹನಗಳಿಗೆ ಪ್ರತ್ಯೇಕ ಮಾರ್ಗ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಎರಡು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು
ಹೆಜಮಾಡಿಯಲ್ಲಿ ಹೆಚ್ಚುವರಿ ಸುಂಕ ಸಂಗ್ರಹ ಮಾಡದೆ ಈ ಹಿಂದೆ ಹೆಜಮಾಡಿಯಲ್ಲಿ ಸಂಗ್ರಹವಾಗುತ್ತಿದ್ದ ಸುಂಕವನ್ನೇ ಪಡೆಯಬೇಕು
ಮತ್ತು ಸುರತ್ಕಲ್ ಸುಂಕವನ್ನು ಹೆಜಮಾಡಿಗೆ ವರ್ಗಾಯಿಸುವುದರ ಸಮಸ್ಯೆ ನಿಭಾಯಿಸುವ ಬಗ್ಗೆ ಕೇಂದ್ರದ ಹಂತದಲ್ಲಿ ಮಾತುಕತೆ ನಡೆಸಿ ಆ ಹೊರೆಯನ್ನು ಹೆಜಮಾಡಿಗೆ ಮಾತ್ರ ಹರಿಸದೆ ಬೇರೆ ಯಾವು ರೀತಿ ರಿಯಾಯಿತಿ ನೀಡಬಹುದು ಎಂಬ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ಮಾಡಬೇಕು. ಅಲ್ಲಿಯ ತನಕ ಸಮಸ್ಯೆ ಪರಿಹಾರ ಆಗುವವರೆಗೆ ಹೆಜಮಾಡಿಯಲ್ಲಿ ಹೊಸ ಸುಂಕವನ್ನು ಸಂಗ್ರಹ ಮಾಡಬಾರದು ಎಂದು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ನವ ಮಂಗಳೂರು ಬಂದರಿಗೆ ಆಗಮಿಸಿದ 2 ನೇ ಬೃಹತ್ ಹಡಗು ‘ಸೆವೆನ್ ಸೀಸ್ ಎಕ್ಸ್ಪ್ಲೋರರ್ – Vishwanews24
