ಹೆಣ್ಣುಮಕ್ಕಳ ಬಗ್ಗೆ ನನಗೆ ಗೌರವವಿದೆ, ನನ್ನ ಮಾತುಗಳಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ:  ಸದನದಲ್ಲಿ ಕ್ಷಮೆಯಾಚಿಸಿದ  ರಮೇಶ್ ಕುಮಾರ್

Featured, ರಾಜ್ಯ ನ್ಯೂಸ್

ಹೆಣ್ಣುಮಕ್ಕಳ ಬಗ್ಗೆ ನನಗೆ ಗೌರವವಿದೆ, ನನ್ನ ಮಾತುಗಳಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ:  ಸದನದಲ್ಲಿ ಕ್ಷಮೆಯಾಚಿಸಿದ  ರಮೇಶ್ ಕುಮಾರ್ – Vishwanews24

ಬೆಳಗಾವಿ: ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಕುರಿತು ಬೆಳಗಾವಿಯ ಸುವರ್ಣ ವಿಧಾನ ಸೌಧದದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕಲಾಪ ವೇಳೆ ಹೇಳಿಕೆ ನೀಡಿ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಹೇಳಿಕೆ ತೀವ್ರ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ರಮೇಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ. ಇಂದು ಬೆಳಗ್ಗೆ ಸದನದಲ್ಲಿ ಮಾತನಾಡಿದ ಅವರು, ನನಗೆ ಹೆಣ್ಣು ಮಕ್ಕಳ ಬಗ್ಗೆ, ಹೆಣ್ಣು ಕುಲದ ಬಗ್ಗೆ ಅಪಾರ ಗೌರವವಿದೆ, ನನ್ನ ಮಾತುಗಳಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ, ಕ್ಷಮೆಯಿರಲಿ, ಈ ವಿವಾದ ಇಲ್ಲಿಗೇ ನಿಲ್ಲಲಿ, ಸುಖಾಂತ್ಯವಾಗಲಿ ಎಂದು ಕೇಳಿಕೊಂಡರು.

ರಮೇಶ್ ಕುಮಾರ್ ಅವರು ನಿನ್ನೆ ಅತ್ಯಾಚಾರ ಕುರಿತು ಮಾತನಾಡಿದ ಕೂಡಲೇ ಆಡಳಿತಾರೂಢ ಪಕ್ಷ ಬಿಜೆಪಿಯ ನಾಯಕರು ರಮೇಶ್ ಕುಮಾರ್ ವಿರುದ್ಧ ಕೆಂಡಕಾರಲು ಆರಂಭಿಸಿದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ರಮೇಶ್ ಕುಮಾರ್ ಅವರು ಸದನದಲ್ಲಿಯೇ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಇಂದು ಬೆಳಗಾವಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡುತ್ತಾ ಒತ್ತಾಯಿಸಿದ್ದರು.

ರಮೇಶ್ ಕುಮಾರ್ ಅವರು ಮಾತನಾಡಿರುವುದು ಅಕ್ಷಮ್ಯ ಅಪರಾಧ. ಇಡೀ ದೇಶವೇ ಸದನವನ್ನು ನೋಡುತ್ತಿದೆ. ಮಹಿಳೆಯರನ್ನು ಗೌರವಿಸುವ, ಹೆಣ್ಣನ್ನು ಪೂಜಿಸುವ ಭಾರತದಲ್ಲಿ ಈ ರೀತಿ ಹೇಳಿಕೆ ನೀಡುವುದು, ಪವಿತ್ರವಾದ ಸ್ಥಾನದಲ್ಲಿರುವ ಸದನದಲ್ಲಿ ಈ ರೀತಿ ಅಕ್ಷಮ್ಯವಾಗಿ ಮಾತನಾಡುವುದು ತಪ್ಪು ಎಂದು ಬಿಜೆಪಿ ಶಾಸಕಿಯರು ವಿರೋಧ ವ್ಯಕ್ತಪಡಿಸಿದ್ದು ಇಂದು ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗಿಳಿದಿದ್ದರು. ಸದನದಲ್ಲಿ ರಮೇಶ್ ಕುಮಾರ್ ಅವರು ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಬಿಡುವುದಿಲ್ಲ, ಸದನದ ಬಾವಿಗಿಳಿದು ಹೋರಾಟ ನಡೆಸಲು ಮುಂದಾಗುತ್ತೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಇತರ ಬಿಜೆಪಿ ಶಾಸಕಿಯರು ಆಗ್ರಹಿಸಿದ್ದರು.

 

ಅಂಗವಿಕಲೆಯೊಬ್ಬರ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ  : ಫೋಟೋ ವೈರಲ್‌ – Vishwanews24