ಅಕ್ರಮ ಮುಚ್ಚಿಡಲೆಂದೇ ಇಂಧನ ಖಾತೆಗಾಗಿ ಪಟ್ಟು ಹಿಡಿದ ಡೀಕೇಶಿ ; ಶೋಭಾ ಕರಂದ್ಲಾಜೆ ಆರೋಪ

Featured, ದಕ್ಷಿಣ ಕನ್ನಡ

ಮಂಗಳೂರು : “ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಇಂಧನ ಸಚಿವರಾಗಿದ್ದಾಗ ನಡೆಸಿರುವ `ಅಕ್ರಮ’ ಮುಚ್ಚಿಡುವ ಒಂದೇ ಉದ್ದೇಶದಿಂದ ಮಾಜಿ ಇಂಧನ ಸಚಿವ ಡಿ ಕೆ ಶಿವಕುಮಾರ್ ಪ್ರಸಕ್ತ ಮೈತ್ರಿ ಸರ್ಕಾರದಲ್ಲೂ ಇಂಧನ ಖಾತೆಗೆ ಪಟ್ಟು ಹಿಡಿದಿದ್ದಾರೆ” ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಇಂಧನ ಖಾತೆ ಯಥೇಚ್ಛ ದುರುಪಯೋಗವಾಗಿದೆ ಎಂದು ಹಿಂದೊಮ್ಮೆ ಇಂಧನ ಸಚಿವರೂ ಆಗಿದ್ದ ಕರಂದ್ಲಾಜೆ ಆಪಾದಿಸಿದ್ದಾರೆ.

“ಡೀಕೇಶಿಯಿಂದ ಇಂಧನ ಖಾತೆಯ ದುರುಪಯೋಗವಾಗಿದೆ. ಈ ವಲಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅಪರಿಮಿತ ಅಕ್ರಮಗಳು ನಡೆದಿವೆ. ಒಂದೊಮ್ಮೆ ಇಂಧನ ಖಾತೆ ಕೈತಪ್ಪಿದರೆ, ಇಲಾಖೆಯಲ್ಲಿ ನಡೆದಿರುವ ಅಕ್ರಮಗಳು ಒಂದೊಂದಾಗಿ ಮೇಲೆ ಬೀಳಬಹುದೆಂಬ ಭೀತಿಯಿಂದ ಅವರೀಗ ಮತ್ತೊಂದು ಅವಧಿಗೆ ಇಂಧನ ಖಾತೆಯ ಮೇಲೆ ಹಕ್ಕು ಸ್ಥಾಪಿಸಲು ಮುಂದಾಗಿದ್ದಾರೆ” ಎಂದು ಟೀಕಿಸಿದ್ದಾರೆ.

“ಸರ್ಕಾರ ರಚನೆಗೊಂಡು ಎರಡು ವಾರವಾದರೂ ಖಾತೆ ಹಂಚಿಕೆಗಾಗಿ ಹಗ್ಗಜಗ್ಗಾಟ ಮುಂದುವರಿದೆ. ಈ ಅವಧಿಯಲ್ಲಿ ಕಾಂಗ್ರೆಸ್ ಶಾಸಕರು ರಿಸಾರ್ಟ್ ರಾಜಕಾರಣ ಮತ್ತು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮಹತ್ತಾದ ಸಾಧನೆ ಮಾಡಿದ್ದಾರೆ” ಎಂದು ಕರಂದ್ಲಾಜೆ ಆರೋಪಿಸಿದ್ದಾರೆ.

ಧಾರಾಕಾರ ಮಳೆಯ ಬಳಿಕವೂ ಮಂಗಳೂರು, ಉಡುಪಿಯ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳತ್ತ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಿಲ್ಲ ಎಂದವರು ಟೀಕಿಸಿದ್ದಾರೆ.