ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆಗೆ ದೂರದಲ್ಲಿ ಮಸೀದಿಯೂ ನಿರ್ಮಾಣವಾಗಲಿ, ಹಿಂದೂ ಮತ್ತು ಮುಸ್ಲಿಂ ಎಂಬ ತಾರತಮ್ಯ ಬೇಡ, ನಾವೆಲ್ಲರೂ ಒಂದೇ,” : ಪೇಜಾವರ ಶ್ರೀ -Vishwanews24
ಹಾಸನ: ಹಿಂದು-ಮುಸ್ಲಿಂ ಎಂಬ ತಾರತಮ್ಯ ಬೇಡ. ನಾವೆಲ್ಲರೂ ಒಂದೇ. ಆದರೆ, ರಾಮಮಂದಿರ ನಿರ್ಮಾಣವಾಗಲೇಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದರು.
ಹಾಸನಕ್ಕೆ ಆಗಮಿಸಿದ್ದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿ, ”ರಾಮಮಂದಿರ ನಿರ್ಮಾಣಕ್ಕೆ ರವಿಶಂಕರ್ ಗುರೂಜಿ ಮಧ್ಯಸ್ಥಿಕೆ ವಹಿಸುವ ಜವಾಬ್ದಾರಿ ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ. ರಾಮಮಂದಿರ ನಿರ್ಮಾಣ ಆಗಲೇಬೇಕು. ಅಯೋಧ್ಯೆಯ ಸ್ವಲ್ಪ ದೂರದಲ್ಲಿ ಮುಸಲ್ಮಾನರಿಗೂ ಮಸೀದಿ ಆಗಲಿ. ಹಿಂದೂ ಮತ್ತು ಮುಸ್ಲಿಂ ಎಂಬ ತಾರತಮ್ಯ ಬೇಡ, ನಾವೆಲ್ಲರೂ ಒಂದೇ,” ಎಂದು ಪ್ರತಿಪಾದಿಸಿದರು.
”ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಗೆ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ. ಸಮಿತಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡೋಣ. ಆದರೆ, ಸಮಿತಿಯ ಸಂಧಾನದಿಂದ ಅಯೋಧ್ಯೆ ಪರಿಸ್ಥಿತಿ ಬಗೆಹರಿಯುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ,” ಎಂದರು.
ಚುನಾವಣೆ ಕುರಿತು ಮಾತನಾಡಿದ ಅವರು, ”ರಾಜಕೀಯವಾಗಿ ನಾನು ಏನನ್ನೂ ಈ ಸಂದರ್ಭದಲ್ಲಿ ಮಾತನಾಡುವುದಿಲ್ಲ. ಆದರೆ ಮತದಾರರು ದೇಶದ ಬಗ್ಗೆ ಕಾಳಜಿ ಇಟ್ಟುಕೊಂಡು ಮತದಾನ ಮಾಡಬೇಕು. ಇವತ್ತಿನ ನಾಗರಿಕರು ಪ್ರಬುದ್ಧರಿದ್ದಾರೆ. ಯಾರನ್ನು ಆರಿಸಬೇಕೆಂಬ ಅರಿವು ಅವರಿಗಿದೆ. ಯಾವುದೇ ಪಕ್ಷ ಕ್ಕೆ ಮತ ಹಾಕಿ ಎಂದು ಹೇಳುವುದಿಲ್ಲ. ನಾನು ಪಕ್ಷಾತೀತವಾಗಿ ಮತ ಚಲಾಯಿಸಿ ಎಂದು ಹೇಳುವೆ. ರಾಜ್ಯವನ್ನು ಸಮರ್ಥನೆ ಮಾಡುವ ನಾಯಕನನ್ನು ಆರಿಸುವ ಹೊಣೆಗಾರಿಕೆ ಮತದಾರರದ್ದಾಗಿರಲಿ,” ಎಂದು ನುಡಿದರು
