ಇನ್ನೂ ನಿಂತಿಲ್ಲ ಕನ್ನಡಿಗರ ಮೇಲಿನ ತಮಿಳರ ಅಟ್ಟಹಾಸ, ಟಾರ್ಚರ್ ತಾಳಲಾರದೆ ಯುವಕ ಆತ್ಮಹತ್ಯೆಗೆ ಶರಣು

Featured, ರಾಜ್ಯ ನ್ಯೂಸ್

ಹಾಸನ: ತಮಿಳುನಾಡು ಮೂಲದ ಕಂಪನಿಯೊಂದರಲ್ಲಿ ಕನ್ನಡಿಗರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಯುವಕ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹಾಸನ ನಗರದ ಬಸಟ್ಟಿಕೊಪ್ಪಲಿನಲ್ಲಿ ಈ ಘಟನೆ ನಡೆದಿದ್ದು, ಸೇವಾರ್ಥ್ ಆತ್ಮಹತ್ಯೆಗೆ ಶರಣಾದ ಯುವಕ. ನಗರದ ಪಿಎಸ್‍ಆರ್ ಸಿಲ್ಕ್ ನಲ್ಲಿ ಸೇವಾರ್ಥ್ ಕೆಲಸ ಮಾಡುತ್ತಿದ್ದು, 8 ವರ್ಷಗಳಿಂದ ಇದೇ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸದ್ಯ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ತಲುಪಿದ್ದರು. ಈ ಹಿಂದೆ ಮೈಸೂರಿನ ಬ್ರಾಂಚ್‍ ನಲ್ಲಿದ್ದ ಸೇವಾರ್ಥ್‍ನನ್ನು ಇತ್ತೀಚೆಗೆ ಹಾಸನಕ್ಕೆ ವರ್ಗಾಯಿಸಿದ್ದರು.

ಈಗ ಮತ್ತೆ ಮಂಗಳೂರು ಬ್ರಾಂಚ್‍ಗೆ ವರ್ಗಾವಣೆ ಮಾಡಿದ್ದರು. ಕೇವಲ ಎರಡು ದಿನ ರಜೆ ತೆಗೆದುಕೊಂಡಿದ್ದಕ್ಕೆ ನನಗೆ ಕಿರುಕುಳ ನೀಡಿದ್ದಾರೆ. ನಾನು ಕನ್ನಡಿಗ ಎಂದು ನನಗೆ ಕಿರುಕುಳ ನೀಡುತ್ತಿದ್ದಾರೆ. ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ನನಗೆ ಕಿರುಕುಳ ನೀಡಿರುವ ಮೂವರಿಗೆ ಶಿಕ್ಷೆಯಾಗಬೇಕು ಎಂದು ತನ್ನ ವಿಡಿಯೋದಲ್ಲಿ ಸೇವಾರ್ಥ್ ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ:
ಸ್ನೇಹಿತರೆ ನಾನು ಕನ್ನಡಿಗನಾಗಿ ಮಾತನಾಡುತ್ತಿದ್ದೇನೆ. ನಮ್ಮ ಕನ್ನಡದಲ್ಲಿ ನಮಗೆ ಬದುಕಲು ರಕ್ಷಣೆ ಇಲ್ಲ. ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಆದರೆ ನಾನು 2 ದಿನ ಹುಷಾರಿಲ್ಲದ ಕಾರಣ ರಜೆ ಹಾಕಿದ್ದಕ್ಕೆ 15 ದಿನ ಡಿಸ್‍ಮಿಸ್ ಮಾಡಿದರು. ಮೈಸೂರಿನ ಬ್ಯಾಚಿನಲ್ಲಿ ಇಬ್ಬರು ಮತ್ತು ಹಾಸನದಲ್ಲಿ ಒಬ್ಬ ಈ ಮೂವರು ಕಿರುಕುಳ ನೀಡಿದ್ದಾರೆ. ಆದ್ದರಿಂದ ನಾನು ಸಾಯುತ್ತಿದ್ದೇನೆ. ನನ್ನ ಸಾವಿಗೆ ಈ ಮೂವರೇ ಕಾರಣರಾಗಿದ್ದಾರೆ. ಅವರ ವಿರುದ್ಧ ಹೋರಾಡಿ ಶಿಕ್ಷೆ ಕೊಡಿಸಿ, ನನ್ನ ಆತ್ಮಕ್ಕೆ ಶಾಂತಿ ಕೊಡಿಸಿ ಎಂದು ಸ್ನೇಹಿತರಲ್ಲಿ ಮತ್ತು ಕನ್ನಡಕ್ಕೆ ರಕ್ಷಣೆ ಕೊಡಿಸಿ ಎಂದು ಕರ್ನಾಟಕ ರಕ್ಷಣೆ ವೇದಿಕೆ ಬಳಿ ಮನವಿ ಮಾಡಿಕೊಂಡಿದ್ದಾರೆ.