ಉಗ್ರಗಾಮಿಗಳಿಗೆ ಕಾಂಗ್ರೆಸ್ ನಿಂದ ಬಿರಿಯಾನಿ, ನಮ್ಮಿಂದ ಗುಂಡೇಟು: ಆದಿತ್ಯನಾಥ್

Featured, ರಾಷ್ಟ್ರ ನ್ಯೂಸ್

ಮಕ್ರಾನಾ: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕಾಂಗ್ರೆಸ್‌ ಉಗ್ರರಿಗೆ ಬಿರಿಯಾನಿ ತಿನ್ನಿಸಿದೆ. ನಾವು ಈಗ ಉಗ್ರರಿಗೆ ಗುಂಡೇಟು ತಿನ್ನಿಸುತ್ತಿದ್ದೇವೆ’ ಎಂದು ಸೋಮವಾರ ಹೇಳಿದ್ದಾರೆ.

ಇಂದು ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಕಾಂಗ್ರೆಸ್‌ ವಿಭಜನೆಯ ರಾಜಕಾರಣವನ್ನು ಅನುಸರಿಸಿಕೊಂಡು ಬಂದ ಕಾರಣ ದೇಶದಲ್ಲಿ ಭಯೋತ್ಪಾದನೆ ಬೆಳೆದು ಬಂದಿದೆ ಎಂದು ಆರೋಪಿಸಿದರು.

ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಲವಾರು ರಾಜಕೀಯ ನಾಯಕರು ಸದ್ಯ ರಾಜಸ್ಥಾನದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ರಾಜಸ್ಥಾನದ ಮಕ್ರಾನಾ ಎಂಬ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ, ಉಗ್ರಗಾಮಿಗಳಿಗೆ ಕಾಂಗ್ರೆಸ್ ಪಕ್ಷವು ಬಿರಿಯಾನಿ ನೀಡುತ್ತಿದ್ದರೆ ನಾವು ಮಾತ್ರ ಉಗ್ರಗಾಮಿಗಳಿಗೆ ಗುಂಡೇಟು ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ.

ಬಿರಿಯಾನಿ ತಿಂದು ಬೆಳೆದ ಉಗ್ರರಿಗೆ ನಾವು ಈಗ ಗುಂಡಿನ ರುಚಿ ತೋರಿಸುತ್ತಿರುವುದನ್ನು ನೀವು ನೋಡಿದ್ದೀರಿ. ದೇಶದಲ್ಲಿ ಭಯೋತ್ಪಾದನೆಯ ಹುಟ್ಟು, ಬೆಳವಣಿಗೆಗೆ ಕಾಂಗ್ರೆಸ್‌ ಪಕ್ಷವೇ ಕಾರಣ, ದೇಶದಲ್ಲಿನ ಭಯೋತ್ಪಾದನೆ, ಪ್ರತ್ಯೇಕತೆ, ನಕ್ಸಲ್‌ವಾದ ಮತ್ತು ಭ್ರಷ್ಟಾಚಾರದಂತಹ ಪಿಡುಗುಗಳಿಗೆ ಜನ್ಮ ನೀಡಿದ್ದೇ ಕಾಂಗ್ರೆಸ್‌  ಎಂದು ಉತ್ತರ ಪ್ರದೇಶ ಸಿಎಂ  ವಾಗ್ದಾಳಿ ನಡೆಸಿದರು.