ಉಚ್ಚಿಲ : ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದರೋಡೆ : ನಗದು ಸಹಿತ 2 ಬೆಳ್ಳಿ ತಟ್ಟೆ ಕಳವು – Vishwanews24
ಉಚ್ಚಿಲ : ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದರೋಡೆ : ನಗದು ಸಹಿತ 2 ಬೆಳ್ಳಿ ತಟ್ಟೆ ಕಳವು
ಕಾಪು : ದೇವಸ್ಥಾನದ ಕಾಣಿಕೆ ಡಬ್ಬದಿಂದ 15,000 ರೂಪಾಯಿ ನಗದು ಹಾಗೂ 500 ರೂಪಾಯಿ ಬೆಲೆಬಾಳುವ ಬೆಳ್ಳಿಯ 2 ತಟ್ಟೆಗಳನ್ನು ಕಳವು ಮಾಡಲಾದ ಘಟನೆ ಉಡುಪಿಯ ಕಾಪುವಿನ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ನಡೆದಿದೆ.
ಕಿಡಿಗೇಡಿಗಳು ಗುಡಿಯ ಒಳಗೆ ಪ್ರವೇಶಿಸಿ ಶಿಲಾಮೂರ್ತಿಯ ಮುಖವಾಡಕ್ಕೆ ಇಡಲಾದ ಪಂಚಲೋಹದ ತಗಡು ಹಾಗೂ ಪಾಣಿಪೀಠದ ಕವಚಗಳನ್ನು ತೆಗೆದು ಅಲ್ಲೇ ಬಿಟ್ಟು ಹೋಗಿದ್ದಾರೆ.
ಬಳಿಕ ದ್ವಾರದಲ್ಲಿದ್ದ ಎರಡು ಲಾಕರ್ ಕಾಣಿಕೆ ಡಬ್ಬಿಯನ್ನು ಒಡೆಯಲು ಯತ್ನಿಸಿದ್ದು ಕೂಡಾ ಕಂಡುಬಂದಿದೆ. ದೇಗುಲದ ಕಚೇರಿಯ ಬೀರುವನ್ನು ಮುರಿದು ಜಾಲಾಡಿದ್ದಾರೆ.

ಅಲ್ಲಿಂದ ಎರಡು ಬೆಳ್ಳಿಯ ತಟ್ಟೆಗಳನ್ನು ಕಳವು ಮಾಡಿದ್ದಾರೆ. ಕಳ್ಳರು ಧ್ವಜಸ್ತಂಭದ ಮೇಲೇರಿ ದೇಗುಲದ ಒಳಗೆ ಪ್ರವೇಶಿಸಿದ್ದು, ಹೊರ ಹೋಗುವಾಗ ಪಶ್ಚಿಮದ ಮುಖ್ಯದ್ವಾರ ತೆರೆದುಕೊಂಡು ಹೋಗಿದ್ದಾರೆ.ದೇಗುಲದ ಸಹ ಅರ್ಚಕ ರಾಜಾರಾಮ್ ಭಟ್ ಅವರು ಬೆಳಗ್ಗೆ ದೇಗುಲಕ್ಕೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಆಡಳಿತ ಮಂಡಳಿಯವರಿಗೆ ಮಾಹಿತಿ ನೀಡಿದ್ದಾರೆ.
ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಪಡುಬಿದ್ರಿಯವರು ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಳ್ಳನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
