ಉಡುಪಿಯಲ್ಲಿ ಪುಂಡಾಟಿಕೆ ತೋರಿದ್ದ ಲಕ್ಷ್ಮೀಶ ಸಾವು
ಉಡುಪಿ: ಉಡುಪಿಯಲ್ಲಿ 16 ವರ್ಷಗಳ ಹಿಂದೆ ತನ್ನ ಆಕ್ರೋಶ ತೋರಿಸಿದ್ದ ಶೀರೂರು ಮಠದ ಆನೆ ಲಕ್ಷ್ಮೀಶ ಸೆ. 19ರಂದು ಮೈಸೂರು ಜಿಲ್ಲೆ ಹುಣಸೂರು ಬಳಿ ಕಲ್ಲಳ್ಳದಲ್ಲಿ ಮೃತಪಟ್ಟಿದೆ. ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಿಂದ 20 ದಿನಗಳ ಹಿಂದೆ ಮದವೇರಿ ನಾಪತ್ತೆಯಾದ ಬಳಿಕ ಲಕ್ಷ್ಮೀಶ ಕಾಡಾನೆ ಹಿಂಡಿನಲ್ಲಿ ಸೇರಿಕೊಂಡು ಜಗಳವಾಡಿ ಪೆಟ್ಟು ತಿಂದಿತ್ತು. ಮಂಗಳವಾರ ಸಂಜೆ ವೇಳೆ ಕೊಳಂಗೇರಿ ಹಾಡಿ ಬಳಿ ಆನೆಯನ್ನು ಪತ್ತೆ ಹಚ್ಚಲಾಗಿತ್ತು.
ಆನೆಯನ್ನು ಶಿಬಿರಕ್ಕೆ ಕರೆ ತರಲು ಪಶುವೈದ್ಯ ಡಾ| ಮುಜೀಬ್ ರೆಹಮಾನ್ ಅವರು ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಇದರಿಂದ ಜ್ಞಾನತಪ್ಪಿ ಬಳಿಕ ಎಚ್ಚರಗೊಂಡಿದ್ದ ಆನೆ ಅಸ್ವಸ್ಥಗೊಂಡು ಮೃತಪಟ್ಟಿದೆ.
2ನೇ ಪರ್ಯಾಯ ವೇಳೆ ದಾನ
ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥರ ಎರಡನೆಯ ಪರ್ಯಾಯ 1994-96ರ ಅವಧಿಯಲ್ಲಿ ಎಂ.ವೀರಪ್ಪ ಮೊಲಿ ಮುಖ್ಯಮಂತ್ರಿಯಾಗಿದ್ದಾಗ ಲಕ್ಷ್ಮೀಶನನ್ನು ದಾನವಾಗಿ ಕೊಡಲಾಗಿತ್ತು. ಈ ಆನೆ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮೊದಲ ಪರ್ಯಾಯ 2002-04ರ ಅವಧಿಯಲ್ಲಿ ಉಡುಪಿಯಲ್ಲಿ ಪುಂಡಾಟ ನಡೆಸಿತ್ತು. ಆಗ ಪೊಲೀಸ್ ಹಿರಿಯ ಅಧಿಕಾರಿಗಳು “ಶೂಟ್ ಎಟ್ ಸೈಟ್’ಗೆ ನಿರ್ಧರಿಸಿದ್ದರು. ಆದರೆ ಶೀರೂರು ಸ್ವಾಮೀಜಿಯವರು ಪೊಲೀಸರ ಮನವೊಲಿಸಿದ್ದರು. ಅನಂತರ ಮೈಸೂರಿನ ಮೃಗಾಲಯದ ವೈದ್ಯರು ಬಂದು ಚಿಕಿತ್ಸೆ ನೀಡಿದ್ದರು. ಅನಂತರ ಶೀರೂರಿನಲ್ಲಿದ್ದ ಆನೆ ಧರ್ಮಸ್ಥಳದಿಂದ ಕಳುಹಿಸಲಾದ ಮಾವುತನಿಂದ ನಿಯಂತ್ರಣಕ್ಕೆ ಬಂದಿತ್ತು. ಬಳಿಕ ವೈದ್ಯರು ನೀಡಿದ ಸಲಹೆಯಂತೆ ಉಪ್ಪಿನಂಗಡಿಗೆ ಕಳುಹಿಸಲಾಯಿತು.
ಸ್ವಾಮೀಜಿ ನಿಧನದ 2 ತಿಂಗಳ ಬಳಿಕ
ಶ್ರೀಲಕ್ಷ್ಮೀವರ ತೀರ್ಥರ ಅಕ್ಕರೆಯಲ್ಲಿ ಬೆಳೆದಿದ್ದ ಲಕ್ಷ್ಮೀಶ ಆನೆ, ಸ್ವಾಮೀಜಿ ತೀರಿಕೊಂಡ 2ತಿಂಗಳ ಬಳಿಕ ಮೃತಪಟ್ಟಿದೆ.ಸ್ವಾಮೀಜಿ ಜು. 19ರಂದು ಮೃತಪಟ್ಟಿದ್ದರೆ ಲಕ್ಷ್ಮೀಶ ಸೆ. 19ರಂದು ಮೃತಪಟ್ಟಿದೆ.
2002ರಲ್ಲಿ ಉಡುಪಿಯಲ್ಲಿ ನಡೆದ ದಾಂಧಲೆಯ ಬಳಿಕ ಲಕ್ಷ್ಮೀಶ ಆನೆಯನ್ನು ನಾನೇ ಸಾಕಿದ್ದೇನೆ. 9-10ವರ್ಷಗಳ ನನ್ನ ಬಳಿ ಇದ್ದ ಆನೆಯನ್ನು 2013ರಲ್ಲಿ ಮತ್ತಿಗೋಡು ಶಿಬಿರಕ್ಕೆ ಒಪ್ಪಿಸಲಾಗಿತ್ತು. ಅಲ್ಲಿಯವರೆಗೆ ಆ ಆನೆ ಶಿರೂರು ಮಠದ ಹೆಸರಿನಲ್ಲೇ ಇತ್ತು. 33ವರ್ಷಗಳ ಕಾಲ ನಾನು ಒಟ್ಟು ಮೂರು ಆನೆಗಳನ್ನು ಸಾಕಿದ್ದೇನೆ. ಆದರೆ ಲಕ್ಷ್ಮೀಶನಂತಹ ಗುಣ ಇರುವ ಆನೆ ಮತ್ತೊಂದಿಲ್ಲ. ಮಾವುತರ ತಪ್ಪಿನಿಂದ ಲಕ್ಷ್ಮೀಶ ಕೆಲವು ಬಾರಿ ಪುಂಡಾಟಿಕೆ ನಡೆಸಿದೆ.
-ಕರುಣಾಕರ ಪೂಜಾರಿ, ಉಪ್ಪಿನಂಗಡಿ
