ಉಡುಪಿ: ಕೃಷ್ಣಮಠದಲ್ಲಿ ಅನ್ನ ಪ್ರಸಾದಕ್ಕೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ : ಶಿರೂರು ಮಠದ ದಿವಾನರು – vishwanews24
ಉಡುಪಿ: ಕೃಷ್ಣಮಠದಲ್ಲಿ ಅನ್ನ ಪ್ರಸಾದಕ್ಕೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ..
ಗ್ಯಾಸ್ ಮುಗಿದರೂ ಕಟ್ಟಿಗೆ ಒಲೆಯಲ್ಲಿ ಭೋಜನ ವ್ಯವಸ್ಥೆಗೆ ಸದಾ ಸಿದ್ಧ : ಶಿರೂರು ಮಠದ ದಿವಾನರು
ಉಡುಪಿ: ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನಡೆಯುವ ಅನ್ನದಾನ ಹಾಗೂ ಊಟೋಪಚಾರ ವ್ಯವಸ್ಥೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ಶಿರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.
ಪ್ರತಿ ದಿನ ಸಾವಿರಾರು ಭಕ್ತರು ಭೋಜನ ಸ್ವೀಕರಿಸುವ ಉಡುಪಿ ಶ್ರೀ ಕೃಷ್ಣಮಠವನ್ನು ‘ಅನ್ನ ಬ್ರಹ್ಮನ ದೇಗುಲ’ ಎಂದೇ ಕರೆಯಲಾಗುತ್ತದೆ. ಇಲ್ಲಿ ಪರಂಪರೆಯಿಂದ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಪದ್ಧತಿ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ಅಡುಗೆ ಕಾರ್ಯಕ್ಕೆ ಅನಿಲದ ಅವಲಂಬನೆಯೂ ಹೆಚ್ಚಾಗಿದೆ. ಸದ್ಯ ಅಡುಗೆ ಅನಿಲ ಲಭ್ಯವಿದ್ದು, ಯಾವುದೇ ತೊಂದರೆ ಇಲ್ಲ. ಆದರೆ ಅನಿಲ ಲಭ್ಯವಾಗದ ಪರಿಸ್ಥಿತಿ ಎದುರಾದರೂ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ಸದಾ ಸಿದ್ಧವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:👇
ಉಡುಪಿ ಕೃಷ್ಣಮಠದಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡುವ ಸಂಪ್ರದಾಯ ಇಂದಿಗೂ ಉಳಿದಿದ್ದು, ಈ ಉದ್ದೇಶಕ್ಕಾಗಿ ಮಠದ ವತಿಯಿಂದ ಕಾಡನ್ನೇ ಬೆಳೆಸಲಾಗುತ್ತದೆ. ಸುಮಾರು 36 ವರ್ಷಕ್ಕೊಮ್ಮೆ ಕಾಡಿನಿಂದ ಕಟ್ಟಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಬಂದರೆ ಕಟ್ಟಿಗೆ ತರಿಸಿಕೊಂಡು ಎಷ್ಟು ಜನರಿಗಾದರೂ ಊಟೋಪಚಾರ ವ್ಯವಸ್ಥೆ ಮಾಡುವ ಧೈರ್ಯ ಮಠಕ್ಕೆ ಇದೆ ಎಂದು ತಿಳಿಸಿದರು.
ಇದಲ್ಲದೆ, ಅಡುಗೆ ವ್ಯವಸ್ಥೆಯನ್ನು ಮತ್ತಷ್ಟು ಸ್ವಾವಲಂಬಿ ಮಾಡುವ ಉದ್ದೇಶದಿಂದ ಬಯೋಗ್ಯಾಸ್ ಘಟಕ ಅಳವಡಿಸುವ ಕಾರ್ಯವೂ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಾರೆ, ಯಾವುದೇ ಸಂಕಷ್ಟದ ಪರಿಸ್ಥಿತಿಯಲ್ಲೂ ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುವ ಅನ್ನದಾನ ಸೇವೆಗೆ ಅಡ್ಡಿ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಪಹಾರ ಮತ್ತು ಭೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ:👇
ಉಡುಪಿ: ವ್ಯಕ್ತಿಯನ್ನು 30 ವರ್ಷದಿಂದ ಜೀತಕ್ಕೆ ಇರಿಸಿಕೊಂಡಿದ್ದ ಮಹಿಳೆಯ ಬಂಧನ – vishwanews24
ಪ್ರತಿದಿನದಂತೆ ಭೋಜನ ಪ್ರಸಾದ ಮತ್ತು ಉಪಹಾರವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಈಗಾಗಲೇ ಒಂದು ವಾರಕ್ಕೆ ಬೇಕಾದ ಗ್ಯಾಸ್ ಶೇಖರಿಸಲ್ಪಟ್ಟಿದ್ದು, ಬುಧವಾರ ಕೂಡ ಶ್ರೀ ದೇವಳಕ್ಕೆ ಗ್ಯಾಸ್ ಸಿಲಿಂಡರ್ ಬಂದಿದೆ. ಆದ್ದರಿಂದ ಭಕ್ತರಿಗೆ ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ದೇವಳದ ಆಡಳಿತ ತಿಳಿಸಿದೆ.
ಗ್ಯಾಸ್ ಉಳಿಕೆಗೆ ಕ್ರಮ: ಯುದ್ಧದ ಕಾರಣದಿಂದ ಗ್ಯಾಸ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಕಾರಣದಿಂದ ಮಿತವಾಗಿ ಗ್ಯಾಸ್ ಬಳಸಲು ದೇವಳದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ, ದೇವಳದಲ್ಲಿ ದಿನವಾಹಿ ನೀಡುತ್ತಿದ್ದ ವಿವಿಧ ರೀತಿಯ ಉಪಹಾರ ತಿನಿಸುಗಳಿಗೆ ಬದಲಾಗಿ, ಎರಡು ದಿನಕ್ಕೊಮ್ಮೆ ಅವಲಕ್ಕಿ ಮೊಸರು ಹಾಗೂ ಉಳಿದ ದಿನ ಹೆಸರು ಕಾಳು, ಉಪ್ಪಿಟ್ಟು ವಿತರಣೆ ನಡೆಯಲಿದೆ.
ಅದೇ ರೀತಿ, ಭೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೆಚ್ಚುವರಿ ತಯಾರಿಸುತ್ತಿದ್ದ ಪಲ್ಯಕ್ಕೆ ಬದಲಾಗಿ ದೇವಳದ ಪ್ರಸಿದ್ಧ ಬೋಜನ ಖಾದ್ಯ ಚಟ್ನಿಯನ್ನು ಮಾತ್ರ ತಯಾರಿಸಿ ವಿತರಿಸಲಾಗುತ್ತದೆ. ಆದ್ದರಿಂದ ಭಕ್ತರಿಗೆ ಭೋಜನ ಪ್ರಸಾದ ಹಾಗೂ ಉಪಹಾರ ತದೇಕ ಪ್ರಕಾರವಾಗಿ ವಿತರಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ:👇
