ಉಡುಪಿ ಬೃಹತ್ ಜನಾಗ್ರಹ ಮೆರವಣಿಗೆಯಲ್ಲಿ ರಾರಾಜಿಸಿದ ಕೇಸರಿ ಧ್ವಜ ; ಮುಸ್ಲಿಂ ಅಭಿಮಾನಿಗಳಿಂದ ಪಾನಕ ಸೇವೆ
ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ಭಾನುವಾರ ಬೃಹತ್ ಜನಾಗ್ರಹ ಜಾಥಾ ನಡೆಯಿತು.
ಜಿಲ್ಲೆಯ ನಾನಾ ಕಡೆಗಳಿಂದ ಬಂದ ಸಾವಿರಾರು ಹಿಂದೂಗಳು ಭಾಗವಹಿಸಿದ್ದರು. ಉಡುಪಿಯ ಜೋಡುಕಟ್ಟೆಯಿಂದ ಜನಾಗ್ರಹ ಸಭೆ ನಡೆಯುವ ಶ್ರೀಕೃಷ್ಣ ಮಠದ ಪಾರ್ಕಿಂಗ್ ಸ್ಥಳದವರೆಗೆ ಸುಮಾರು 3 ಕಿ.ಮೀ. ದೂರ ಮೆರವಣಿಗೆ ನಡೆಯಿತು.
ಉಡುಪಿ ನಗರದೆಲ್ಲೆಡೆ ಕೇಸರಿ ಭಗವಧ್ವಜಗಳು ಹಾರಾಡುತ್ತಿದ್ದವು. ಜಾತಿ ಮತ ಭೇದ ಮರೆತು ಪುರುಷರು, ಮಹಿಳೆಯರು, ಮಕ್ಕಳು, ಭಗವಧ್ವಜ ಹಿಡಿದು ಜೈ ಶ್ರೀರಾಮ್ ಘೋಷಣೆಯನ್ನು ಉಡುಪಿಯಲ್ಲಿ ಮೊಳಗಿಸಿದರು.
ಈ ವೇಳೆ ಉಡುಪಿ ಕೋರ್ಟ್ ಮುಂಭಾಗ ಶ್ರೀ ಪೇಜಾವರ ಶ್ರೀಪಾದರ ಮುಸ್ಲಿಂ ಅಭಿಮಾನಿಗಳ ವತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಪಾನಕ ವ್ಯವಸ್ಥೆ ಮಾಡಲಾಗಿತ್ತು.
ಜನಾಗ್ರಹ ಜಾಥದಲ್ಲಿ ಬಾಳೆಕುದ್ರು ಮಠದ ಶ್ರೀ ನರಸಿಂಹಾಶ್ರಮ ಸ್ವಾಮೀಜಿ, ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತಿತರು ಪಾಲ್ಗೊಂಡಿದ್ದರು.

