ಉಡುಪಿ : ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಉಡುಪಿ- 25 ಲಕ್ಷ ರೂ. ಪ್ರತಿಭಾ ಪುರಸ್ಕಾರ -ಸನ್ಮಾನ -ಬಹುಮಾನ ವಿತರಣೆ: vishwanews24
ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಉಡುಪಿ- 25 ಲಕ್ಷ ರೂ. ಪ್ರತಿಭಾ ಪುರಸ್ಕಾರ -ಸನ್ಮಾನ -ಬಹುಮಾನ ವಿತರಣೆ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ “ಕಾಪು ಪಿಲಿಕೋಲ” ದೈವ ನರ್ತಕ ಗುಡ್ಡ ಪಾಣಾರ ರವರಿಗೆ ಸನ್ಮಾನ
ಉಡುಪಿ: ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಉಡುಪಿ ಇದರ ವತಿಯಿಂದ ಎಸ್ ಎಸ್ ಎಲ್ ಸಿ ,ಪಿಯುಸಿ,ಹಾಗೂ ಸ್ನಾತಕೋತ್ತರ 1200 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ಪ್ರತಿಭಾ ಪುರಸ್ಕಾರ ವಿತರಣೆ ಮತ್ತು 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡಿನ ಹೆಮ್ಮೆಯ “ಕಾಪು ಪಿಲಿಕೋಲ” ದೈವ ನರ್ತಕ ಗುಡ್ಡ ಪಾಣಾರ ರವರಿಗೆ ಸನ್ಮಾನ ಕಾರ್ಯಕ್ರಮ, ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಸ ಸಹಯೋಗದೊಂದಿಗೆ ಆಯೋಜಿಸಿದ್ದ ದ.ಕ ಉಡುಪಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಅಜ್ಜರಕಾಡು ಪುರಭವನದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಶಿಕ್ಷಣ ನಿಧಿಗೆ ಬ್ಯಾಂಕಿನ ವತಿಯಿಂದ ಎಂಟು ಲಕ್ಷ ರೂಪಾಯಿ ದೇಣಿಗೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಜಿ ಶಂಕರ್ “ಬ್ಯಾಂಕಿನ ಲಾಭದ ಪಾಲನ್ನು ಸಮಾಜಕ್ಕೆ ನೀಡುವ ಮೂಲಕ ಹಿಂದುಳಿದವರು ಮುಂದಕ್ಕೆ ಬರಲು ಸಹಕಾರಿಯಾಗುತ್ತೆ-ದೈವನರ್ತಕರಿಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಸರ್ಕಾರ ನೀಡಬೇಕು” ಎಂದರು.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ಮಚ್ವೀಂದ್ರ ಮಾತನಾಡಿ “ವಿದ್ಯಾರ್ಥಿ ಜೀವನದಲ್ಲಿಯೇ ಶಿಕ್ಷಣದ ಜೊತೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜೀವನ ಕೌಶಲ್ಯ ಬೆಳೆಸಿಕೊಂಡಲ್ಲಿ ಮಾತ್ರ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನವನ್ನು ಎಚ್ಚರಿಕೆಯಿಂದ ಬಳಸಿ ಸ್ವಸಾಮರ್ಥ್ಯ ಗುರುತಿಸಿಕೊಂಡು ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯ ಬೇಕು. ಇಂದು ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಪಡೆದ ಪ್ರತಿಭಾ ಪುರಸ್ಕಾರ ಮುಂದಿನ ಸಾಧನೆಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.

ಇಂದ್ರಾಳಿ ಜಯಕರ ಶೆಟ್ಟಿ,ಜಯ ಸಿ ಕೋಟ್ಯಾನ್,ಭಾಸ್ಕರ ಎಸ್ ಶೆಟ್ಟಿ,ಅಕ್ಷಯ ಪಿ ಶೆಟ್ಟಿ ಉಪಸ್ಥಿತರಿದ್ದರು.
