ಉಡುಪಿ:ಬಹುಕೋಟಿ ವಂಚನೆ ಹಾಗೂ ಬ್ಲ್ಯಾಕ್ಮೇಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಝೀನತ್ ವಿರುದ್ಧ ತನಿಖೆ ಮುಂದುವರಿದಂತೆ ಮತ್ತೆರಡು ಹೊಸ ಪ್ರಕರಣಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಈ ಹಿಂದೆ ಜುಲೈ 2ರಂದು ಉಡುಪಿ ಮೂಲದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಝೀನತ್ (41) ವಿರುದ್ಧ ಪ್ರಕರಣ ದಾಖಲಾಗಿತ್ತು. ದೂರುದಾರರಿಂದ ಹಂತ ಹಂತವಾಗಿ ಸುಮಾರು 70 ಲಕ್ಷ ರೂ. ಪಡೆದು ದುರುಪಯೋಗಪಡಿಸಿಕೊಂಡಿದ್ದಲ್ಲದೆ, ಹಣ ವಾಪಸ್ ಕೇಳಿದಾಗ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ, 40 ಲಕ್ಷ ರೂ. ನೀಡುವಂತೆ ಬ್ಲ್ಯಾಕ್ಮೇಲ್ ಮಾಡಿದ್ದಾಳೆ ಎಂದು ಆರೋಪಿಸಲಾಗಿತ್ತು. ಕೆಲ ಗಣ್ಯ ವ್ಯಕ್ತಿಗಳ ಖಾಸಗಿ ಫೋಟೋಗಳು ತನ್ನ ಬಳಿ ಇವೆ ಎಂದು ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ದೂರಿನ ಆಧಾರದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಆರೋಪಿ ಝೀನತ್ ಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದರು.
ತನಿಖೆ ವೇಳೆ ಆರೋಪಿಯಿಂದ ಅಶ್ಲೀಲ ವಿಡಿಯೋಗಳು ಹಾಗೂ ಕೆಲವರ ಖಾಸಗಿ ಫೋಟೋಗಳ ಸ್ಕ್ರೀನ್ಶಾಟ್ಗಳನ್ನು ಸಂಗ್ರಹಿಸಿಟ್ಟಿದ್ದ ಪೆನ್ಡ್ರೈವ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಸಾಕ್ಷಿದಾರರ ವಿಚಾರಣೆ ವೇಳೆ ಝೀನತ್ ಇನ್ನೂ ಹಲವರಿಗೆ ಇದೇ ರೀತಿಯಲ್ಲಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.
148 ಗ್ರಾಂ ಚಿನ್ನ ಪಡೆದು ವಂಚನೆ
ಪ್ರಕರಣದ ಮಾಹಿತಿ ತಿಳಿದ ಬಳಿಕ ಜುಲೈ 8ರಂದು ಮಣಿಪಾಲ ಮೂಲದ ಮತ್ತೋರ್ವ ವ್ಯಕ್ತಿ ದೂರು ದಾಖಲಿಸಿದ್ದಾರೆ. 2020ರಲ್ಲಿ ತುರ್ತು ಹಣದ ಅಗತ್ಯವಿದೆ ಎಂದು ಹೇಳಿ, ಅಲ್ಪಸಂಖ್ಯಾಕರ ಯೋಜನೆಯಡಿ 2 ಕೋಟಿ ರೂ. ಸಾಲ ಮಂಜೂರಾಗಲಿದ್ದು, ಒಂದು ವರ್ಷದೊಳಗೆ ಹಣ ಹಾಗೂ ಚಿನ್ನವನ್ನು ಹಿಂದಿರುಗಿಸುವುದಾಗಿ ನಂಬಿಸಿದ್ದ ಝೀನತ್, ದೂರುದಾರರಿಂದ ಸುಮಾರು 148 ಗ್ರಾಂ ಚಿನ್ನ ಪಡೆದು ಅಡವಿರಿಸಿ 4.36 ಲಕ್ಷ ರೂ. ಹಣ ಪಡೆದಿದ್ದಾಳೆ ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಸಾಲದ ಕಂತುಗಳನ್ನು ಪಾವತಿಸಿದ್ದರೂ ಬಳಿಕ ಪಾವತಿ ನಿಲ್ಲಿಸಿ ಚಿನ್ನವನ್ನೂ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣ ಕೇಳಲು ಮನೆಗೆ ಹೋದಾಗ ಝೀನತ್ ಹಾಗೂ ಆಕೆಯ ಸಂಬಂಧಿಕರು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ವಿಡಿಯೋ ವೈರಲ್ ಬೆದರಿಕೆ; 51 ಲಕ್ಷಕ್ಕೂ ಅಧಿಕ ವಂಚನೆ ಆರೋಪ
ಬನ್ನಂಜೆ ಮೂಲದ ಮತ್ತೋರ್ವ ವ್ಯಕ್ತಿಯೂ ದೂರು ದಾಖಲಿಸಿದ್ದು, 2018ರಿಂದ 2022ರ ಅವಧಿಯಲ್ಲಿ ಉಡುಪಿಯ ಕಾಂಪ್ಲೆಕ್ಸ್ನಲ್ಲಿದ್ದ ಶಾಪ್ ನಲ್ಲಿ ಪರಿಚಯವಾದ ಝೀನತ್ ಹಾಗೂ ಗೀತಾ ರಾವ್ ಸೆಲ್ಫಿ ತೆಗೆಯುವ ನೆಪದಲ್ಲಿ ವಿಡಿಯೋ ಮಾಡಿಕೊಂಡು, ಬಳಿಕ ಅದನ್ನು ವೈರಲ್ ಮಾಡುವುದಾಗಿ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಂತ ಹಂತವಾಗಿ 36.84 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ಪ್ರಕರಣದಲ್ಲಿ ಎರಡನೇ ಆರೋಪಿ ಗೀತಾ ರಾವ್ ಕೂಡ ಬ್ಲ್ಯಾಕ್ಮೇಲ್ ಮಾಡಿ 15 ಲಕ್ಷ ರೂ. ಚಿನ್ನಾಭರಣ ಹಾಗೂ ಕೆಲವು ಬ್ಯಾಂಕ್ ಚೆಕ್ಗಳನ್ನು ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಝೀನತ್ ವಿರುದ್ಧ ಒಂದಾದ ಮೇಲೊಂದು ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದು, ತನಿಖೆ ಮುಂದುವರಿದಂತೆ ಇನ್ನಷ್ಟು ದೂರುಗಳು ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೈಲಿನಲ್ಲಿ ಸಂಚರಿಸುವ ಮುನ್ನ ಹೊಸ ನಿಯಮ ತಿಳ್ಕೊಳ್ಳಿ : ಇನ್ಮುಂದೆ ಮೊಬೈಲ್ನಲ್ಲಿ ಟಿಕಟ್ ತೋರಿಸಿದರೆ ದಂಡ ಫಿಕ್ಸ್ ನವದೆಹಲಿ :ಡಿಜಿಟಲ್…
ಸುರತ್ಕಲ್ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ ಮಂಗಳೂರು: ನಗರದ ಸುರತ್ಕಲ್ ಪೊಲೀಸ್…
ಪತಿಗೆ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪತ್ನಿ ಹಾವೇರಿ: ಪತಿಗೆ ಬೇರೆ…
ಬಡ್ಡಿ ದಂಧೆಕೋರರ ಕಿರುಕುಳ : ಸೆಲ್ಫಿ ವಿಡಿಯೋ ಮಾಡಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಗದಗ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ…
ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರಕ್ಕೆ ಆಕ್ಷೇಪ: ತುರ್ತು ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವರಿಗೆ ಶೋಭಾ ಕರಂದ್ಲಾಜೆ ಪತ್ರ ಬೆಂಗಳೂರು: ಕರ್ನಾಟಕ…
ಬೆಂಗಳೂರು: ಫುಟ್ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ : ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಬೆಂಗಳೂರು…