ಕಾರ್ಯಕ್ರಮ ಅಂಗವಾಗಿ ಮಠದಲ್ಲಿ ನರಸಿಂಹ ಮಂತ್ರ ಹೋಮ, ಶ್ರೀಕೃಷ್ಣ ಮಂತ್ರ ಹೋಮ, ವಿಷ್ಣುಗಾಯತ್ರಿ ಮಂತ್ರ ಹೋಮ, ಶ್ರೀತತ್ವ ಮಂತ್ರ ಹೋಮ, ವಿಷ್ಣು ಸಹಸ್ರನಾಮ, ಸುಂದರಕಾಂಡ, ಮನ್ಯುಸೂಕ್ತ ಪಾರಾಯಣ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ವಿದ್ವಾಂಸರಾದ ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ, ಹೆರ್ಗ ವೇದವ್ಯಾಸ ಭಟ್, ರಾಮಮೂರ್ತಿ ಭಟ್, ಶ್ರೀರಮಣ ಕಲ್ಕೂರ ನೇತೃತ್ವದಲ್ಲಿ ನಡೆಯಿತು.
ಬಳಿಕ ಕೃಷ್ಣನ ಮುಂಭಾಗದ ತೀರ್ಥ ಮಂಟಪದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ದೇವರಲ್ಲಿ ಅಪರಾಧ ಕೃಚ್ಛ್ರದ ಅಂಗವಾಗಿ ಪ್ರಾರ್ಥನೆ, ಮುಷ್ಟಿ ದ್ರವ್ಯ ಸಮರ್ಪಣೆ, ಅನುಜ್ಞಾ ಸ್ವೀಕರಣ ಪ್ರಾಸಾದ ಚೈತನ್ಯ ಸಂಕೋಚ ನಡೆಯಿತು. ಮಠದ ಪೂರ್ವ ಭಾಗದಲ್ಲಿ ಓಂಗಲ್ ತಳಿಯ ವೃಷಭದ (ಎತ್ತು) ಕೋಡಿಗೆ ದರ್ಬೆಯ ದಾರವನ್ನು ಕಟ್ಟಿ ಗರ್ಭಗುಡಿಯ ಶಿಖರವನ್ನು ಎಳೆದು ಕೆಳಗೆ ಇಳಿಸಲಾಯಿತು.
ಉಡುಪಿ ಕೃಷ್ಣಮಠದ ಕಡೆಗೋಲು ಕೃಷ್ಣ ಇಷ್ಟು ವರ್ಷ ತಾಮ್ರದ ಗರ್ಭಗುಡಿಯೊಳಗೆ ನಿಂತು ಬರುವ ಭಕ್ತರಿಗೆ ದರ್ಶನ ಕೊಡುತ್ತಿದ್ದ. ಆದರೆ ಈಗ 40 ಕೋಟಿ ವೆಚ್ಚದಲ್ಲಿ ಕೃಷ್ಣಮಠದ ಗರ್ಭಗುಡಿಯ ಕೆಲಸವನ್ನು ಈಗಿನ ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾಡಿಸುತ್ತಿದ್ದಾರೆ. 20 ಗ್ರಾಂ ಚಿನ್ನದ ತಗಡಿನ 5,000 ಹಲಗೆ, 100 ಕೆಜಿ ಬಂಗಾರ ಹಾಗೂ 40 ಕೋಟಿ ರುಪಾಯಿಯಲ್ಲಿ ಚಿನ್ನದ ಮನೆ ನಿರ್ಮಾಣವಾಗುತ್ತಿದೆ.
ಗರ್ಭಗುಡಿಯ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಗಣಹೋಮ, ಪ್ರಾಯಶ್ಚಿತ್ತ ಹೋಮ, ವಾಸ್ತು ಪೂಜೆ, ಕೃಷ್ಣ ಗಾಯತ್ರಿ ಮಂತ್ರ ಪಠಣ, ಮೃತ್ಯುಂಜಯ ಹೋಮ ಊರಿನ ದೋಷ ಪರಿಹಾರಕ್ಕೆ ಮುಷ್ಟಿ ಕಾಣಿಕೆ ಸೇವೆ ನೆರವೇರಿದೆ. ಮರದ ಮೇಲೆ ತಾಮ್ರದ ಹಾಳೆಯಲ್ಲಿ ಮಂತ್ರಗಳನ್ನು ಬರೆಯಲಾಗುತ್ತದೆ. ಅದರ ಮೇಲೆ ಬೆಳ್ಳಿಯ ತಗಡು ಮುಚ್ಚಿ, ಮೇಲ್ಬಾಗಕ್ಕೆ ಚಿನ್ನದ ಹೊದಿಕೆ ಹಾಸಲಾಗುತ್ತದೆ. ಸಂಕೋಚ ವಿಧಿಯಲ್ಲಿ ಕೃಷ್ಣಾಪುರ, ಕಾಣಿಯೂರು, ಅದಮಾರು ಸ್ವಾಮೀಜಿಗಳು ಪಾಲ್ಗೊಂಡಿದ್ದರು. 800 ವರ್ಷದ ಹಳೆಯ ತಾಮ್ರದ ತಗಡನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ ಎಂದು ಕೃಷ್ಣಭಕ್ತ ವೆಂಕಟೇಶ್ ಆಚಾರ್ಯ ತಿಳಿಸಿದ್ದಾರೆ.
ಗರ್ಭಗುಡಿಗೆ ಚಿನ್ನದ ಅಂತಸ್ತು ಹೊದಿಸಿದರೆ ಆ ಭಾಗದಲ್ಲಿ ಹೆಚ್ಚು ಶಕ್ತಿ ಕ್ರೋಡೀಕರಣವಾಗುತ್ತದೆ ಎಂಬ ನಂಬಿಕೆಯಿದೆ. ಈಗಾಗಲೇ 50 ಕೆಜಿಗೂ ಹೆಚ್ಚು ಚಿನ್ನದ ಸಂಗ್ರಹ ಭಕ್ತರಿಂದ ಆಗಿದೆ. ಪ್ರತಿನಿತ್ಯ ಮಠಕ್ಕೆ ಬರುವ ಭಕ್ತರಿಂದ ದೇಣಿಗೆ ರೂಪದಲ್ಲಿ ಚಿನ್ನ, ಹಣ ಸಂಗ್ರಹವಾಗುತ್ತಿದೆ. ಮೇ ಮೊದಲ ವಾರದಲ್ಲಿ ಬಂಗಾರದ ಮೇಲ್ಛಾವಣಿ ಕಾರ್ಯ ಪೂರ್ಣಗೊಳ್ಳಲಿದೆ.
ಸ್ವರ್ಣ ಗೋಪುರ ನಿರ್ಮಾಣ ಕಾರ್ಯ ನಡೆಯುತ್ತಿದ್ದರೂ ದೇವರ ದರ್ಶನ ಹಾಗೂ ಪೂಜೆಗೆ ಯಾವುದೇ ತೊಡಕಿಲ್ಲ. ಎಲ್ಲವೂ ಈ ಹಿಂದಿನಂತೆಯೇ ನಡೆಯಲಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು. ಬೆಳಗ್ಗೆ 11ಕ್ಕೆ ಮಹಾಪೂಜೆ ನಡೆದ ಬಳಿಕ ಸಂಜೆ 5ರವರೆಗೆ ಗೋಪುರ ಕಾಮಗಾರಿ ನಡೆಯುತ್ತದೆ. ರಾತ್ರಿ 9.30ಕ್ಕೆ ಮಹಾಪೂಜೆ ನಡೆದ ಬಳಿಕ ರಾತ್ರಿ ವೇಳೆಯಲ್ಲೂ ಗೋಪುರ ನಿರ್ಮಾಣ ಕಾರ್ಯ ಮುಂದುವರಿಯುತ್ತದೆ. ಭಕ್ತರು ಕನಕನ ಕಿಂಡಿ, ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಮಾಡಬಹುದು ಎಂದರು.