ಎರ್ಮಾಳು : ಸರಕಾರಿ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಕಾಮಗಾರಿ ನಿಲ್ಲಿಸಿದ ಕಾಪು ತಹಶೀಲ್ದಾರ್ – vishwanews24
ಎರ್ಮಾಳು :ಸರಕಾರಿ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಕಾಮಗಾರಿ ನಿಲ್ಲಿಸಿದ ಕಾಪು ತಹಶೀಲ್ದಾರ್
ಕಾಪು: ಕಾಪು ತಾಲೂಕಿನ ಎರ್ಮಾಳು ತೆಂಕ ಸಮುದ್ರ ಕಿನಾರೆಯಲ್ಲಿ ಅಕ್ರಮ ಚರಂಡಿ ನಿರ್ಮಾಣ ಮಾಡುತ್ತಿದ್ದ ರೆಸಾರ್ಟ್ವೊಂದರ ಕಾಮಗಾರಿಯನ್ನು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ತಡೆ ಹಿಡಿದಿದ್ದಾರೆ. ಎರ್ಮಾಳು ತೆಂಕದಲ್ಲಿ ಕಾರ್ಯಾಚರಿಸುತ್ತಿರುವ ರೆಸಾರ್ಟ್ ಮಾಲೀಕರು ಸರ್ಕಾರಿ ಜಾಗದಲ್ಲಿರುವ ಪರಂಬೋಗು ತೋಡನ್ನು ಅಗಲೀಕರಣಗೊಳಿಸುವ ಕಾಮಗಾರಿ ನಡೆಸುತ್ತಿದ್ದರು.
ಸ್ಥಳೀಯ ಗ್ರಾಮಸ್ಥರು ಈ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಯಾರ ಮಾತನ್ನೂ ಕೇಳದೆ ರೆಸಾರ್ಟ್ ಮಾಲೀಕರು ಕಾಮಗಾರಿ ಮುಂದುವರಿಸಿದ್ದರು. ಈ ಬಗ್ಗೆ ತೆಂಕ ಗ್ರಾಮ ಪಂಚಾಯತಿ ಮತ್ತು ಕಾಪು ತಹಸೀಲ್ದಾರ್ ಅವರಿಗೆ ದೂರು ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಕಾಪು ತಹಶೀಲ್ದಾರ್ ಪ್ರತಿಭಾ ಆಗಮಿಸಿ, ಯಾವುದೇ ಕಾರಣಕ್ಕೂ ಸರಕಾರಿ ಜಾಗದಲ್ಲಿ ಖಾಸಗಿಯವರು ಕಾಮಗಾರಿ ಮಾಡಕೂಡದು. ಏನಿದ್ದರೂ ಸರ್ಕಾರದ ಆದೇಶದಂತೆ
ನಡೆಯಬೇಕು.
ಈಗಾಗಲೇ ಗ್ರಾಮ ಪಂಚಾಯತ್ ಈ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. ತಕ್ಷಣ ಕಾಮಗಾರಿಯನ್ನು ನಿಲ್ಲಿಸಬೇಕು. ಆದೇಶವನ್ನು ಧಿಕ್ಕರಿಸಿ ಕಾಮಗಾರಿ ಮುಂದುವರಿಸಿದರೆ, ಕಾನೂನು ಕ್ರಮ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶ ನೀಡಿದರು. ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಘಟನಾ ಸ್ಥಳದಲ್ಲಿದ್ದು ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
