ಒಕ್ಕಲಿಗರ ಶ್ರೇಷ್ಠ ಸ್ವಾಮೀಜಿ ಯೋಗಿ ಆದಿತ್ಯನಾಥ್ ಗೆ ಅಪಮಾನ! ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಒಕ್ಕಲಿಗರು..
ಕರ್ನಾಟಕದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಲವಾರು ಹೊಸ ವಾದ ವಿವಾದಗಳು ಹುಟ್ಟಿ ಕೊಳ್ಳುತ್ತಿವೆ. ಪ್ರಚಾರದ ಭರಾಟೆಯಲ್ಲಿ ನಾಯಕರುಗಳು ನಾಲಗೆಗಳನ್ನು ಹರಿಬಿಡುತ್ತಿದ್ದಾರೆ. ಎಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ನಮ್ಮ ನಾಯಕರುಗಳು ಮರೆತಂತೆ ಕಾಣುತ್ತಿದೆ. ಈ ಸಾಲಿಗೆ ಇದೀಗ ಕಾಂಗ್ರೆಸ್ನ ಕಾರ್ಯದರ್ಶಿಯಾಗಿರುವ ದಿನೇಶ್ ಗುಂಡೂರಾವ್ ಅವರು ಸೇರ್ಪಡೆಯಾಗಿದ್ದಾರೆ. ಅವರು ಮೊನ್ನೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಆಡಿದ ಮಾತೊಂದು ಇದೀಗ ರಾಜ್ಯಾದ್ಯಂತ ಕಿಚ್ಚು ಹಚ್ಚಿದೆ. ದಿನೇಶ್ ಗುಂಡೂರಾವ್ ವಿರುದ್ಧ ರಾಜ್ಯದ ಮೂಲೆ ಮೂಲೆಯಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

‘ಯೋಗಿ ಆದಿತ್ಯನಾಥ್ ಅವರು ಕರ್ನಾಟಕಕ್ಕೆ ಬಂದರೆ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ’ ಎಂದು ದಿನೇಶ್ ಗುಂಡೂರಾವ್ ಅವರು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದರು. ಇದು ಅಕ್ಷರಶಃ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಯೋಗಿಯವರ ಅಭಿಮಾನಿಗಳನ್ನು ಕೆರಳಿಸಿತ್ತು. ರಾಜ್ಯದ ಹಲವೆಡೆ ದಿನೇಶ್ ಗುಂಡೂರಾವ್ ಅವರ ಮೇಲೆ ಪ್ರಕರಣಗಳು ದಾಖಲಾಗಿದೆ. ಬಿಜೆಪಿ ಈಗಾಗಲೇ ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ಬಿಜೆಪಿಯ ಅಗ್ರಗಣ್ಯ ನಾಯಕರು ದಿನೇಶ್ ಗುಂಡೂರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನೇಶ್ ಗುಂಡೂರಾವ್ ವಿರುದ್ಧ ಹಲವಾರು ಅಭಿಯಾನಗಳು ಪ್ರಾರಂಭವಾಗುತ್ತಿದೆ. ತಕ್ಷಣವೇ ದಿನೇಶ್ ಗುಂಡೂರಾವ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ರಾಹುಲ್ ಗಾಂಧಿಯವರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಮಹಾಂತ ಯೋಗಿ ಆದಿತ್ಯನಾಥರು ನಾಥ ಪರಂಪರೆಗೆ ಸೇರಿದವರಾಗಿದ್ದಾರೆ. ಯೋಗಿ ಆದಿತ್ಯನಾಥರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ನಾಥ ಪರಂಪರೆಯನ್ನು ಆರಾಧಿಸುವ ಕರ್ನಾಟಕದ ಒಕ್ಕಲಿಗ ಸಮುದಾಯವನ್ನು ಅಪಮಾನ ಮಾಡಲಾಗಿದೆ ಎಂದು ಒಕ್ಕಲಿಗ ಸಮುದಾಯದವರು ಆರೋಪಿಸಿದ್ದಾರೆ. ಯೋಗಿ ಆದಿತ್ಯನಾಥರನ್ನು ಅವಮಾನ ಮಾಡುವ ಮೂಲಕ ವಿವಾದದ ಕಿಡಿ ಆಗಿರುವ ದಿನೇಶ್ ಗುಂಡೂರಾವ್ ಅವರನ್ನು ಯಾವುದೇ ಕಾರಣಕ್ಕೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ರಾಜ್ಯ ಒಕ್ಕಲಿಗ ಒಕ್ಕೂಟದ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಯೋಗಿ ಆದಿತ್ಯನಾಥ್ ರವರು ಜನರು ಅತ್ಯಂತ ಗೌರವದಿಂದ ಕಾಣುವ ಗೋರಕನಾಥ್ ಮಂದಿರದ ‘ಮಹಂತ’. ಅನೇಕ ಸೇವೆಗಳನ್ನ ಮಾಡಿ ದೇಶದಲ್ಲಿ ಅಜರಾಮರವಾಗಿರುವ ನಾಥ ಪರಂಪರೆಯಿಂದ ಬಂದವರು ಅವರು. ಕರ್ನಾಟಕದ ಆದಿ ಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಕೂಡ ಅದೇ ಪರಂಪರೆಗೆ ಸೇರಿದವರು. ಹಾಗಾಗಿಯೇ ಯೋಗಿ ಆದಿತ್ಯನಾಥ್ ಹಾಗೂ ನಿರ್ಮಲಾನಂದ ಶ್ರೀ ಗಳು ಆತ್ಮೀಯರು. ಯೋಗಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಖುದ್ದು ನಮ್ಮ ನಿರ್ಮಲಾನಂದ ಶ್ರೀ ಗಳು ಉತ್ತರ ಪ್ರದೇಶಕ್ಕೆ ತೆರಳಿ ಅಭಿನಂದಿಸಿದ್ದರು.

