ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಮೋದಿ ಅನ್ನ ಸಂತರ್ಪಣೆ, ಇದರ ಹಿಂದಿನ ಉದ್ದೇಶ ಏನ್ ಗೊತ್ತಾ…?
ಉಡುಪಿ : ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ದಾಮೋದರ ಮೋದಿ ಹೆಸರಿನಲ್ಲಿ ಬರುವ ಸೋಮವಾರ ಅನ್ನಸಂತರ್ಪಣೆ ಸೇವೆ ಬುಕ್ ಆಗಿದೆ! ಜೂನ್ 25ರಂದು ಮೋದೀಜಿಯವರ ಹೆಸರಿನಲ್ಲಿ ನಿತ್ಯ ಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ವಾಸ್ತವದಲ್ಲಿ ಮೋದಿ ಸ್ವತಃ ಈ ಸೇವೆ ನೀಡುತ್ತಿಲ್ಲ. ಕಟಪಾಡಿಯ ಕೆಲವು ಮಂದಿ ಮೋದಿಯವರ ಅಭಿಮಾನಿಗಳು ಮತ್ತು ಸಂಘ ಪರಿವಾರಗಳ ಕಾರ್ಯಕರ್ತರು ಪ್ರಧಾನಿಯ ಹೆಸರಿನಲ್ಲಿ ಈ ಸೇವೆ ಬುಕ್ ಮಾಡಿದ್ದಾರೆ. ಜೂನ್ 25ರಂದು ಪ್ರಧಾನಿಯವರ ಜನ್ಮ ನಕ್ಷ ತ್ರ ಬರುವುದರಿಂದ ಅವರಿಗೆ ಯಶಸ್ಸು ಶ್ರೇಯೋಭಿವೃದ್ಧಿ ಕೋರಿ ಈ ಸೇವೆ ನೀಡಲಾಗುತ್ತಿದೆ. ಮೋದಿಯವರ ಜನ್ಮ ನಕ್ಷ ತ್ರವಾದ ಅನುರಾಧಾ ನಕ್ಷ ತ್ರ ಸೋಮವಾರದಂದು ಬರುತ್ತಿರುವುದರಿಂದ ಅಂದು ಇಲ್ಲಿನ ಶಿವಾಲಯದಲ್ಲಿ ಸೇವೆ ನೀಡಲು ಅಭಿಮಾನಿಗಳು ಮುಂದಾಗಿದ್ದಾರೆ.

ಏನಿದು ಅನ್ನಸಂತರ್ಪಣೆ ಸೇವೆ?: ಉಡುಪಿ ಜಿಲ್ಲೆಯ ಬಿಲ್ಲವ ಸಮಾಜ ಬಾಂಧವರ ಪ್ರಮುಖ ಶ್ರದ್ಧಾ ಕೇಂದ್ರವಾದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಮೂರು ವರ್ಷಗಳ ಹಿಂದೆ ಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವದ ಸಂದರ್ಭ ಆಡಳಿತ ಮಂಡಳಿಯು ಚಲನಚಿತ್ರ ನಟ, ನಿರ್ದೇಶಕ, ರಾಜಕೀಯ ನೇತಾರ ರಾಜಶೇಖರ್ ಕೋಟ್ಯಾನ್ ಅವರ ಮುತುವರ್ಜಿಯಲ್ಲಿ ಪ್ರತಿ ಸೋಮವಾರ ಅನ್ನಸಂತರ್ಪಣೆಯನ್ನು ಆರಂಭಿಸಿತ್ತು. ಭಕ್ತಾದಿಗಳಿಗೂ ತಮ್ಮ ಹೆಸರಿನಲ್ಲಿ ಈ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು. ಪ್ರತಿ ಸೇವೆಗೆ 5000 ರೂ. ನೀಡಿದರೆ ಆ ದಿನದ ಅನ್ನ ಸಂತರ್ಪಣೆ ಸೇವೆ ಹಾಗೂ ಪೂಜೆಯನ್ನು ಭಕ್ತಾದಿಗಳ ಹೆಸರಿನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಸೇವಾದಾರರು ಇಲ್ಲದ ದಿನದ ಸ್ವತಃ ರಾಜಶೇಖರ್ ಕೋಟ್ಯಾನ್ ಅವರೇ ಆ ವೆಚ್ಚ ಭರಿಸುತ್ತಾರೆ. ದಿನದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಸೇವೆ ಸಲ್ಲಿಸಲು ಅವಕಾಶವಿದೆ.
5000 ರೂ.ನ ಸೇವೆಯಲ್ಲಿ 300 ಜನರಿಗೆ ಅನ್ನ, ಸಾಂಬಾರು,ಹುಳಿ, ಪಲ್ಯ, ಉಪ್ಪಿನಕಾಯಿ ಮತ್ತು ಪಾಯಸದ ಊಟ ಬಡಿಸಲಾಗುತ್ತದೆ. ಒಂದು ವೇಳೆ ಸೇವಾದಾರರು ಹೆಚ್ಚುವರಿ ಸಿಹಿ ನೀಡ ಬಯಸಿದರೆ ಅದಕ್ಕೂ ಅವಕಾಶವಿದೆ.
