ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Featured, ಉಡುಪಿ, ದಕ್ಷಿಣ ಕನ್ನಡ

ಮಂಗಳೂರು/ಉಡುಪಿ: ಅರಬಿ ಸಮುದ್ರದಲ್ಲಿ “ಮೆಕ್ನು’ ಹೆಸರಿನ ಮತ್ತೂಂದು ಪ್ರಬಲ ಚಂಡಮಾರುತ ಸೃಷ್ಟಿಯಾಗಿದ್ದು, ಇದರ ಪರಿಣಾಮ ಕಡಲು ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಯಿದೆ. ಮೀನು ಗಾರರು ಮೇ 26ರ ತನಕ ಸಮುದ್ರ ಕ್ಕಿಳಿಯಬಾರದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಅರಬಿ ಸಮುದ್ರದಲ್ಲಿ ನೈಋತ್ಯ ದಿಕ್ಕಿ ನಲ್ಲಿ ಈಗ “ಮೆಕ್ನು’ ಚಂಡಮಾರುತ ಕೇಂದ್ರೀಕೃತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರತೆಯನ್ನು ಪಡಕೊಂಡು ಪಶ್ಚಿಮ ಮಧ್ಯ ದಿಕ್ಕಿನತ್ತ ಚಲಿಸುವ ಮುನ್ಸೂಚನೆಯಿದೆ. ಈ ಚಂಡಮಾರುತವು ಮೇ 26ರಂದು ಸೊಕೋಟ್ರಾ ದ್ವೀಪಗಳ ಆಗ್ನೇಯ ದಿಕ್ಕಿಗೆ ಮತ್ತು ಒಮಾನ್‌ ದೇಶದ ಸಲಾಲ್ಹಾದ ದಕ್ಷಿಣ- ಆಗ್ನೇಯ ದಿಕ್ಕಿನತ್ತ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಆದರೆ ಕಳೆದ ವಾರ ಸೃಷ್ಟಿಯಾಗಿದ್ದ “ಸಾಗರ್‌’ ಚಂಡಮಾರುತಕ್ಕೆ ಹೋಲಿಸಿದರೆ ಇದರ ತೀವ್ರತೆ ಹಾಗೂ ಗಾಳಿಯ ವೇಗ ಮತ್ತಷ್ಟು ಜಾಸ್ತಿಯಿದೆ ಎನ್ನಲಾಗಿದೆ.

ಪ್ರಸ್ತುತ ಈ ಚಂಡಮಾರುತವು ಭಾರತದ ಕರಾವಳಿಯಿಂದ ಒಮಾನ್‌ ಕಡೆಗೆ ಚಲಿಸುತ್ತಿರುವುದರಿಂದ ಭಾರತದ ಪಶ್ಚಿಮ ಕರಾವಳಿ ಮತ್ತು ಲಕ್ಷ ದ್ವೀಪದ ಮೇಲೆ ಪ್ರತಿಕೂಲ ಪರಿ ಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಭಾವಿಸಲಾಗಿದೆ. ಆದರೆ ಒಂದೊಮ್ಮೆ ಚಂಡಮಾರುತವು ತನ್ನ ಚಲಿಸುವ ದಿಕ್ಕು ಬದಲಾಯಿಸಿದರೆ ಕರ್ನಾಟಕ ಕರಾವಳಿಯತ್ತ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

“ಮೆಕ್ನು’ ಚಂಡಮಾರುತದ ಪರಿಣಾಮವಾಗಿ ಕರಾವಳಿ ಕರ್ನಾಟಕದಲ್ಲಿ ಅಂದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೂರ್‍ನಾಲ್ಕು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಈ ಚಂಡಮಾರುತದ ಪರಿಣಾಮ ಗಂಟೆಗೆ 150- 160 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಅಧಿಕ‌ವಾಗಲಿದೆ.